ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿವಿಯಲ್ಲಿ 41 ಉತ್ತರ ಪತ್ರಿಕೆ ತಿದ್ದುಪಡಿ! ಗುತ್ತಿಗೆ ನೌಕರನ ಅಕ್ರಮ– FIR

* ಬೆಂಗಳೂರು ವಿಶ್ವವಿದ್ಯಾಲಯಕ್ಕೆ ವಂಚನೆ * ಠಾಣೆಗೆ ದೂರು ನೀಡಿದ ಕುಲಸಚಿವ ಶ್ರೀನಿವಾಸ್
Published 18 ಜುಲೈ 2023, 0:02 IST
Last Updated 18 ಜುಲೈ 2023, 0:02 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೇರಿದ್ದ 41 ಉತ್ತರ ಪತ್ರಿಕೆಗಳನ್ನು ತಿದ್ದುಪಡಿ ಮಾಡಲಾಗಿದ್ದು, ಈ ಅಕ್ರಮ ಎಸಗಿರುವ ಆರೋಪದಡಿ ಗುತ್ತಿಗೆ ನೌಕರ ಟಿ. ಮಂಜುನಾಥ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘2019ರಿಂದ 2023ರವರೆಗಿನ ಅವಧಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಶ್ರೀನಿವಾಸ್ ದೂರು ನೀಡಿದ್ದಾರೆ. ಪರೀಕ್ಷಾ ಭವನದ ಗುತ್ತಿಗೆ ನೌಕರ ಟಿ. ಮಂಜುನಾಥ್ (45) ಹಾಗೂ ಇತರರ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಜ್ಞಾನಭಾರತಿ ಠಾಣೆ ಪೊಲೀಸ್ ಮೂಲಗಳು ಹೇಳಿವೆ.

‘ವಿಶ್ವವಿದ್ಯಾಲಯದ ಪದವಿ (ಯು.ಜಿ) ಹಾಗೂ ಸ್ನಾತಕೋತ್ತರ (ಪಿ.ಜಿ) ಪರೀಕ್ಷೆಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲಾಗಿದೆ. ಉತ್ತರ ಪತ್ರಿಕೆಗಳನ್ನು ಸ್ಕ್ಯಾನಿಂಗ್ ಮಾಡಿ, ನಂತರ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಇದೇ ಕೆಲಸಕ್ಕೆ ನಿಯೋಜನೆಗೊಂಡಿದ್ದ ನೌಕರ ಮಂಜುನಾಥ್, ಭಾಗಶಃ ಖಾಲಿ ಬಿಡಲಾಗಿದ್ದ 41 ಉತ್ತರ ಪತ್ರಿಕೆಗಳನ್ನು ಅಕ್ರಮವಾಗಿ ಪುನಃ ಬರೆಸಿ ಫಲಿತಾಂಶದ ಮೇಲೆ ಪರಿಣಾಮ ಬೀರುವಂತೆ ಮಾಡಿರುವುದಾಗಿ ದೂರಿನಲ್ಲಿ ಕುಲಸಚಿವರು ಆರೋಪಿಸಿದ್ದಾರೆ’ ಎಂದು ತಿಳಿಸಿವೆ.

ಬಂಡಲ್‌ನಲ್ಲಿದ್ದ ಉತ್ತರ ಪತ್ರಿಕೆಗಳು: ‘ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಬಂಡಲ್‌ಗಳಲ್ಲಿ ಇರಿಸಲಾಗುತ್ತದೆ. ನಿಗದಿತ ಬಂಡಲ್‌ಗಳನ್ನು ತೆರೆದು ಒಂದೊಂದೇ ಉತ್ತರ ಪತ್ರಿಕೆಯನ್ನು ಪರೀಕ್ಷಾ ಭವನದ ನೌಕರರು ಸ್ಕ್ಯಾನಿಂಗ್ ಮಾಡುತ್ತಾರೆ. ನಂತರ, ಅದೇ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬಂಡಲ್‌ನಿಂದ ಅಕ್ರಮವಾಗಿ ಉತ್ತರ ಪತ್ರಿಕೆಗಳನ್ನು ಹೊರಗೆ ತೆಗೆದಿದ್ದ ಆರೋಪಿಗಳು, ಸಂಬಂಧಪಟ್ಟ ವಿದ್ಯಾರ್ಥಿಗಳಿಂದ ಪುನಃ ಉತ್ತರ ಬರೆಸಿದ್ದಾರೆ. ಅದೇ ಉತ್ತರ ಪತ್ರಿಕೆಯನ್ನು ಸ್ಕ್ಯಾನಿಂಗ್ ಮಾಡಿ ಪುನಃ ಬಂಡಲ್‌ನೊಳಗೆ ಸೇರಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ತಿಳಿಸಿವೆ.

ಹಣಕ್ಕಾಗಿ ಸಂಚು ರೂಪಿಸಿ ಕೃತ್ಯ: ‘ಆರೋಪಿ ಟಿ. ಮಂಜುನಾಥ್, 2019ರಿಂದ ಪರೀಕ್ಷಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಇವರ ಜೊತೆ ಮತ್ತಷ್ಟು ಗುತ್ತಿಗೆ ನೌಕರರು ಕೆಲಸಕ್ಕಿದ್ದರು. ಇವರಲ್ಲಿ ಹಲವರು, ಹಣಕ್ಕಾಗಿ ಸಂಚು ರೂಪಿಸಿ ಮೌಲ್ಯಮಾಪನದಲ್ಲಿ ಅಕ್ರಮ ಎಸಗಿರುವ ಅನುಮಾನವಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಏಪ್ರಿಲ್ 25ರಿಂದ ಕೆಲಸಕ್ಕೆ ಗೈರಾಗಿರುವ ಮಂಜುನಾಥ್, ವಾಪಸು ಕಚೇರಿಗೆ ಬಂದಿಲ್ಲ. ರಜೆ ಬಗ್ಗೆಯೂ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದು ತಿಳಿಸಿವೆ.

‘41 ಉತ್ತರ ಪತ್ರಿಕೆಗಳ ಫಲಿತಾಂಶವನ್ನು ಈಗಾಗಲೇ ತಡೆ ಹಿಡಿದಿರುವುದಾಗಿ ದೂರುದಾರರು ತಿಳಿಸಿದ್ದಾರೆ. ಗುತ್ತಿಗೆ ನೌಕರ, ವಿದ್ಯಾರ್ಥಿಗಳು ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರನ್ನೂ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT