ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೀಸ್‌, ಬಿಸ್ಕತ್‌ ರೂಪ ಪಡೆದ ಸಿರಿಧಾನ್ಯ

Last Updated 23 ಡಿಸೆಂಬರ್ 2022, 21:45 IST
ಅಕ್ಷರ ಗಾತ್ರ

ಬೆಂಗಳೂರು: ಸಿರಿಧಾನ್ಯಗಳ ಮಹತ್ವ, ಅವುಗಳ ಬಳಕೆಯ ಪ್ರಯೋಜನ ತಿಳಿಸಲು 2023 ಅನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ವೆಂದು ಘೋಷಿಸಲಾಗಿದ್ದು, ಇದರ ಭಾಗವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ‘ಮೌಲ್ಯವರ್ಧನಾ ಕೇಂದ್ರ’
ಸಿರಿಧಾನ್ಯಗಳನ್ನೇ ಬಳಸಿ ಎರಡು ಪದಾರ್ಥ ಅಭಿವೃದ್ಧಿಗೊಳಿಸಿ ಮಾರುಕಟ್ಟೆಗೆ ಪರಿಚಯಿಸಿದೆ.

ನವಣೆ ಬಳಸಿ ಗ್ಲುಟಿನ್ ಮುಕ್ತ ‘ಕುಕ್ಕೀಸ್‌’ ಹಾಗೂ ಸಾಮೆ ಬಳಸಿ ಕಡಿಮೆ ಕೊಬ್ಬಿನ ಅಂಶವುಳ್ಳ ‘ಬಿಸ್ಕತ್‌’ ಅಭಿವೃದ್ಧಿ ಪಡಿಸಲಾಗಿದೆ.

ವಿಶ್ವವಿದ್ಯಾಲಯದ ‘ಬೇಕರಿ ತರಬೇತಿ ಹಾಗೂ ಮೌಲ್ಯವರ್ಧನ ಕೇಂದ್ರ’ದಲ್ಲಿ ವರ್ಷವಿಡೀ ಸಿರಿಧಾನ್ಯಗಳಾದ ರಾಗಿ, ಸಜ್ಜೆ, ನವಣೆ, ಬುರುಗ, ಸಾಮೆ, ಹಾರಕ, ಊದಲು ಹಾಗೂ ಕೊರಲೆ ಬಳಸಿ ಬೇರೆ ಪದಾರ್ಥ ತಯಾರಿಸಲು ತಜ್ಞರು ಸಿದ್ಧತೆ ನಡೆಸಿದ್ದಾರೆ. ಈ ವಿಶೇಷ ವರ್ಷಾಚರಣೆಯನ್ನೇ ಬಳಸಿಕೊಂಡು ಸಿರಿಧಾನ್ಯಕ್ಕೆ ಆಕರ್ಷಣೆ ತರಲು, ಸಿರಿಧಾನ್ಯ ಬಳಕೆ ಹೆಚ್ಚಿಸಲು ಕೃಷಿ ವಿವಿಯು ಮುಂದಾಗಿದೆ.

ಸಿರಿಧಾನ್ಯಗಳ ಜತೆಗೆ ಶುಂಠಿ ಹಾಗೂ ಚಕ್ಕೆಗಳನ್ನು ಬಳಸಿ ಆರೋಗ್ಯಕರ, ಪೌಷ್ಟಿಕ ಹಾಗೂ ಔಷಧೀಯ ಗುಣವುಳ್ಳ ಇನ್ನಷ್ಟು ಪದಾರ್ಥ, ಪೇಯ ತಯಾರಿಸುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಈ ಪದಾರ್ಥಗಳೂ ಜನರಿಗೆ ಲಭ್ಯವಾಗಲಿವೆ ಎನ್ನುತ್ತಾರೆ ವಿವಿ ತಜ್ಞರು.

ವಿಶೇಷತೆ ಏನು?: ‘ಬೇಕರಿ ಪದಾರ್ಥಗಳಲ್ಲಿ ಮೈದಾ ಬಳಕೆ ಸಾಮಾನ್ಯ. ಮೈದಾ ಹಾಗೂ ಗೋಧಿ ಕೆಲವರ ದೇಹಕ್ಕೆ ರುಚಿಸುವುದಿಲ್ಲ. ಮೈದಾ ಹಾಕಿದ ಪದಾರ್ಥ ಸೇವಿಸಿದರೆ ಕೆಲವರ ಆರೋಗ್ಯದಲ್ಲೂ ವ್ಯತ್ಯಯವಾಗಲಿದೆ.ನಾವು ಪೂರ್ಣಪ್ರಮಾಣದಲ್ಲಿಮೈದಾ ರಹಿತಪದಾರ್ಥತಯಾರಿಸಿದ್ದೇವೆ.ರುಚಿಗೇನೂಕೊರತೆಯಾಗಿಲ್ಲ. ಆರೋಗ್ಯಕ್ಕೂ ಪೂರಕ. ಶಕ್ತಿ, ಪ್ರೋಟಿನ್‌ ಸಹ ಸಿಗಲಿದೆ’ ಎಂದು ‘ಪ್ರಜಾವಾಣಿ’ಗೆ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ.ಮಮತಾ ತಿಳಿಸಿದರು.

‘ಗ್ಲುಟಿನ್‌ಮುಕ್ತ ಕುಕ್ಕೀಸ್‌ ಗ್ಲುಟಿನ್ ಅಲರ್ಜಿ, ಅಸಹಿಷ್ಣುತೆ, ಸೆಲಿಯಾಕ್ ಕಾಯಿಲೆಯವರಿಗೆ ಸೂಕ್ತ. ನಾರು, ಪ್ರೊಟೀನ್‌ ಸಹ ಹೆಚ್ಚಿರುತ್ತದೆ. ಕುಕ್ಕೀಸ್‌ಗೆ ನವಣೆ ಪುಡಿ, ಸ್ವಲ್ಪ ಸಕ್ಕರೆ ಅಂಶ, ಹಾಲಿನ ಪುಡಿ ಬೆರೆಸಿ ತಯಾರಿಸಲಾಗಿದೆ. ಸಾಮೆ ಬಿಸ್ಕತ್‌ ಗ್ಲುಟಿನ್‌ ಮುಕ್ತವಾಗಿವೆ. ಇದರಲ್ಲಿ ಕಡಿಮೆ ಕೊಬ್ಬಿನಾಂಶ ಇರಲಿದೆ. ಸಂಶೋಧನಾ ವಿದ್ಯಾರ್ಥಿನಿ ಸೌಮ್ಯಾ ಹಿರೇಗೌಡ ಈ ಪದಾರ್ಥಗಳ ತಯಾರಿಕೆಯಲ್ಲಿ ಕೈಜೋಡಿಸಿದ್ದರು’ ಎಂದು ಮಮತಾ ಹೇಳಿದರು.

ಸಿರಿಧಾನ್ಯದ ಕುಕ್ಕೀಸ್
ಸಿರಿಧಾನ್ಯದ ಕುಕ್ಕೀಸ್

ಕಡಿಮೆ ಬೆಲೆಗೆ ಮಾರಾಟ

ಬಿಸ್ಕತ್ ಅನ್ನು ಎಲ್ಲ ವಯೋಮಾನದ ಜನರು ಸೇವಿಸುತ್ತಾರೆ.‘ಪೌಷ್ಟಿಕ ಧಾನ್ಯ’ಗಳೆಂದು ಕರೆಯಲಾಗುವ ಸಿರಿಧಾನ್ಯದಿಂದ ತಯಾರಿಸಿದ ಪದಾರ್ಥಗಳು ಎಲ್ಲರಿಗೂ ಲಭ್ಯವಾಗಬೇಕು ಎಂಬ ಕಾರಣಕ್ಕೆ ಅದರ ತಂತ್ರಜ್ಞಾನವನ್ನು ಮಾರಾಟ ಮಾಡಲಾಗಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಕುಲಂಬಿ ಗ್ರಾಮದ ರಘು ಅವರ ಜತೆಗೆ ತಂತ್ರಜ್ಞಾನ ಮಾರಾಟ ಒಪ್ಪಂದ ಮಾಡಿಕೊಳ್ಳಲಾಗಿದೆ.

‘ಕೇಂದ್ರವು ಅಭಿವೃದ್ಧಿ ಪಡಿಸಿದ ತಂತ್ರಜ್ಞಾನವನ್ನು ಕಡಿಮೆಬೆಲೆಗೆ ಮಾರಾಟ ಮಾಡಲಾಗುತ್ತಿದೆ. ₹ 10 ಸಾವಿರ ಜೊತೆಗೆ ಜಿಎಸ್‌ಟಿ ನೀಡಿದರೆ ಸಣ್ಣ ಉದ್ದಿಮೆದಾರರಿಗೆ ತಂತ್ರಜ್ಞಾನ ನೀಡಲಾಗುವುದು. ಜತೆಗೆ ತರಬೇತಿ ನೀಡಲಾಗುವುದು’ ಎಂದು ಮಮತಾ ಅವರು ಹೇಳುತ್ತಾರೆ.

ರಾಜ್ಯದಲ್ಲೂ ‘ಸಿರಿಧಾನ್ಯ ಮೇಳ’

ಜನವರಿಯಲ್ಲಿ ರಾಜ್ಯದಲ್ಲಿ ಸಿರಿಧಾನ್ಯಗಳ ಮೇಳ ಆಯೋಜಿಸಲು ಸರ್ಕಾರ ಚಿಂತಿಸಿದೆ. ನವೆಂಬರ್‌ನಲ್ಲಿ ನಡೆದಿದ್ದ ಕೃಷಿ ಮೇಳದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಿಷಯ ತಿಳಿಸಿದ್ದರು. ಮೇಳ ನಡೆಯುವ ಸ್ಥಳ ಇನ್ನೂ ಅಂತಿಮವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT