ಬೆಂಗಳೂರು: ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಅಥ್ಲೀಟ್ ಅಂಜುಬಾಬ್ಬಿ ಜಾರ್ಜ್,ಇನ್ಫೊಸಿಸ್ ಉಪಾಧ್ಯಕ್ಷಪಾರ್ಥಸಾರಥಿ ಸಹಿತ ಹಲವರು ಶನಿವಾರ ಬಿಜೆಪಿ ಸೇರುವ ಮೂಲಕ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಬೆಂಬಲ ನೀಡಿದರು.
ಜಯನಗರ ವಾಣಿಜ್ಯ ಸಂಕೀರ್ಣದ ಬಳಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಕೇಂದ್ರ ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ.ಮುರಳೀಧರನ್ ಭಾಗವಹಿಸಿದ್ದರು.ನಿವೃತ್ತ ಏರ್ ಮಾರ್ಷಲ್ ಮುರಳಿ ಅವರನ್ನು ಯಡಿಯೂರಪ್ಪ ಅವರು ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ಇತರರಿಗೂ ಅವರು ಧ್ವಜ ನೀಡಿ ಸ್ವಾಗತಿಸಿದರು.
ರಾಜ್ಯ ಸದಸ್ಯತ್ವ ಅಭಿಯಾನ ಉಸ್ತುವಾರಿ ಎನ್.ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿಯ ಸದಸ್ಯತ್ವ 20 ಕೋಟಿ ದಾಟಲಿದೆ ಎಂದರು.
ಆಟೊ ಚಾಲಕರು, ಪ್ರಥಮ ಬಾರಿ ಮತದಾರರಾದ ಯುವಕರು ಕೂಡ ಇದೇ ಸಂದರ್ಭದಲ್ಲಿ ಸದಸ್ಯತ್ವ ನೋಂದಾಯಿಸಿದರು.
ಸಂಸದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶಾಸಕ ರವಿಸುಬ್ರಹ್ಮಣ್ಯ, ಮುರುಗೇಶ್ ನಿರಾಣಿ ಸಹಿತ ಹಲವು ಮುಖಂಡರು ಇದ್ದರು.