ಕೆ.ಆರ್.ಪುರ: ಲಾಕ್ಡೌನ್ ಆದೇಶ ಉಲ್ಲಂಘಿಸಿ ರಸ್ತೆಯಲ್ಲಿ ಅನಗತ್ಯವಾಗಿ ಓಡಾಡಿದ ವಾಹನ ಸವಾರರಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಎಚ್ಚರಿಕೆ ನೀಡಿದರು.
ಟಿನ್ ಫ್ಯಾಕ್ಟರಿ ಬಳಿಯ ಲೌರಿ ಮೆಮೋರಿಯಲ್ ಶಾಲಾ ಆವರಣದಲ್ಲಿ ಮಹದೇವಪುರ ವಲಯದ ಕೋವಿಡ್ ಚಲನವಲನಗಳ ಕಮಾಂಡ್ ಸೆಂಟರ್ ಉದ್ಘಾಟಿಸಿ ಬರುವ ವೇಳೆ ಸವಾರರನ್ನು ಗಮನಿಸಿದ ಅವರು ರಸ್ತೆಗಿಳಿದು ವಾಹನಗಳ ತಪಾಸಣೆ ನಡೆಸಿದರು.
‘ನಿಮಗೆ ಜೀವದ ಭಯ ಇಲ್ಲವೇ? ಅನಗತ್ಯವಾಗಿ ರಸ್ತೆಗೆ ಏಕೆ ಬರುತ್ತಿರಾ?’ ಎಂದು ಸವಾರರನ್ನು ತರಾಟೆಗೆ ತೆಗೆದು ಕೊಂಡರು. ಅನಗತ್ಯವಾಗಿ ಓಡಾಡುವ ವಾಹನ ಸವಾರರಿಗೆ ದಂಡ ವಿಧಿಸಬೇಕು ಹಾಗೂ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಬೇಕು’ ಎಂದು ಪೊಲೀಸರಿಗೆ ಸೂಚನೆ ನೀಡಿದರು.