ಬೆಂಗಳೂರು: ಕೊರೊನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ನಗರದ ಬನಶಂಕರಿ ದೇವಸ್ಥಾನದ ಹುಂಡಿಯಲ್ಲಿ ₹28.60 ಲಕ್ಷ ಸಂಗ್ರಹವಾಗಿದೆ.
ಲಾಕ್ಡೌನ್ ಸಡಿಲಗೊಂಡ ನಂತರ, ಅಂದರೆ ಎರಡು ತಿಂಗಳಿಂದ ದೇವಸ್ಥಾನದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಎರಡು ತಿಂಗಳಲ್ಲಿ ಇಷ್ಟು ಮೊತ್ತ ಸಂಗ್ರಹವಾಗಿದೆ.
ಬನಶಂಕರಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ್, ‘ಹುಂಡಿಯಲ್ಲಿ ಗರಿಷ್ಠ ₹10 ಲಕ್ಷದಿಂದ ₹15 ಲಕ್ಷ ಸಂಗ್ರಹವಾಗಬಹುದು ಎಂದು ಅಂದಾಜಿಸಿದ್ದೆವು. ಆದರೆ, ನಮ್ಮ ನಿರೀಕ್ಷೆಗಿಂತ ಎರಡು ಪಟ್ಟು ಹಣ ಸಂಗ್ರಹವಾಗಿದೆ’ ಎಂದರು.
‘ಅ.2 ಕ್ಕೆ ನಮ್ಮ ಮೂರು ವರ್ಷದ ಅಧಿಕಾರ ಮುಕ್ತಾಯವಾಗುತ್ತಿದ್ದು, ನಮ್ಮ ಅವಧಿಯಲ್ಲಿ ಹುಂಡಿಯಲ್ಲಿ ₹10.50 ಕೋಟಿ, ಸೀರೆ ಹರಾಜಿನಿಂದ ₹1.67 ಕೋಟಿ, ವಿಶೇಷ ಸೇವಾ ದರ್ಶನದಲ್ಲಿ ₹2.60 ಲಕ್ಷ ಸಂಗ್ರಹವಾಗಿದೆ’ ಎಂದು ಶ್ರೀನಿವಾಸ್ ಮತ್ತು ಸಮಿತಿ ಸದಸ್ಯ ಆರ್. ಅರುಣ್ಕುಮಾರ್ ಹೇಳಿದರು.
ಆರೋಗ್ಯ ಕಿಟ್ ವಿತರಣೆ:ದೇವಸ್ಥಾನ ಸಿಬ್ಬಂದಿ ಮತ್ತು ದೇಗುಲದ ಹೊರಗೆ ಹೂವು–ಹಣ್ಣು ಮಾರುವ ವ್ಯಾಪಾರಿಗಳಿಗೆ ಉಚಿತವಾಗಿ 150 ಆರೋಗ್ಯ ಕಿಟ್ ವಿತರಿಸಲಾಯಿತು.
70 ಮಂದಿ ದೇವಸ್ಥಾನದ ಸಿಬ್ಬಂದಿ, ಹೊರಗಡೆ ಹೂವು, ಹಣ್ಣು ಮಾರಾಟ ಮಾಡುವ 80 ಜನರಿಗೆ ಗುರುವಾರ ಮಾಸ್ಕ್, ಫೇಸ್ ಶೀಲ್ಡ್, ಸ್ಯಾನಿಟೈಸರ್ಸ್ ಒಳಗೊಂಡ ಸುರಕ್ಷಿತ ಸಾಧನಗಳ ಹೆಲ್ತ್ ಕಿಟ್ ನೀಡಲಾಯಿತು.