ಬೆಂಗಳೂರು: ‘ಎಐಸಿಸಿ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ ವಿರುದ್ಧ ಕೇಂದ್ರ ಸರ್ಕಾರದ ಸೇಡಿನ ರಾಜಕಾರಣ ಮುಂದುವರೆದಿದ್ದು, ಅದನ್ನು ಖಂಡಿಸಿ ಇದೇ 26ರಂದು ಮೌರ್ಯವೃತ್ತದ ಗಾಂಧಿ ಪ್ರತಿಮೆ ಮುಂದೆ ಮೌನ ಪ್ರತಿಭಟನೆ ನಡೆಸುತ್ತೇವೆ‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಪಕ್ಷದ ಮುಖಂಡ ಚೆಲುವರಾಯಸ್ವಾಮಿ ಜೊತೆ ಚರ್ಚಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
‘ಶಾಸಕ ಜಮೀರ್ ಅಹ್ಮದ್ ಇತ್ತೀಚೆಗೆ ನೀಡಿದ್ದ ಹೇಳಿಕೆಗಳ ಬಗ್ಗೆ ನಿಮ್ಮ ಜೊತೆ ಚೆಲುವರಾಯಸ್ವಾಮಿ ಚರ್ಚಿಸಿದ್ದಾರಾ'ಎಂಬ ಪ್ರಶ್ನೆಗೆ, ‘ಪಕ್ಷ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಲು ಅವರು ಬಂದಿದ್ದರು. ನನ್ನ ಬಳಿ ಪಕ್ಷ ಸಂಘಟನೆ ಬಿಟ್ಟು ಬೇರೆ ವಿಚಾರ ಮಾತನಾಡಲು ಯಾರಿಗೂ ಅವಕಾಶ ಕೊಡುವುದಿಲ್ಲ‘ ಎಂದರು.
ಈ ಮಧ್ಯೆ, ಜಮೀರ್ ಅಹಮ್ಮದ್ಗೆ ಕರೆ ಮಾಡಿರುವ ಚೆಲುವರಾಯಸ್ವಾಮಿ, ‘ಒಕ್ಕಲಿಗರ ವಿಚಾರವಾಗಿ ಮಾತನಾಡುವುದು ಸರಿಯಲ್ಲ. ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿಯೂ ಮಾತನಾಡಬೇಡ. ಪಕ್ಷದಲ್ಲಿ ಅನಗತ್ಯವಾಗಿ ಗೊಂದಲಕ್ಕೆ ಎಡೆ ಮಾಡಿಕೊಡುತ್ತದೆ‘ ಎಂದು ಕಿವಿಮಾತು ಹೇಳಿದ್ದಾರೆ.