ಸಾಮಾಜಿಕ ಹೋರಾಟಗಾರ್ತಿ ದು. ಸರಸ್ವತಿ, ‘ಟಾಟಾ, ಬಿರ್ಲಾ ಅವರ ಪರಂಪರೆಯಿಂದ ಅಂಬಾನಿ, ಅದಾನಿ ಅವರ ಪರಂಪರೆಗೆ ಬಂದಿದ್ದೇವೆ. ಎಲ್ಲ ಸಾರ್ವಜನಿಕ ಉದ್ದಿಮೆಗಳು ಸ್ಥಗಿತವಾಗಿ ಮೂರ್ನಾಲ್ಕು ದಶಕಗಳಾಗಿವೆ. ಖಾಸಗಿ ವಲಯದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದು ಅಪಹಾಸ್ಯವಾಗಿದೆ. ಅಸಂಘಟಿತ ವಲಯದಲ್ಲಿ ಹೆಚ್ಚಿನ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಗಾರ್ಮೆಂಟ್ಸ್ ಉದ್ಯಮದಲ್ಲಿ ಶ್ರಮಿಸುತ್ತಿರುವ ಮಹಿಳೆಯರಿಗೆ ಕನಿಷ್ಠ ವೇತನವೂ ಸಿಗುತ್ತಿಲ್ಲ. ನಗರದ ಸ್ವಚ್ಛತೆಗೆ ದುಡಿಯುತ್ತಿರುವ ಪೌರಕಾರ್ಮಿಕರಿಗೆ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿಲ್ಲ. ಆಶಾ, ಅಂಗನವಾಡಿ, ಬಿಸಿಯೂಟದ ಕಾರ್ಯಕರ್ತೆಯರಿಗೆ ಸಹಾಯಧನ ಮಾತ್ರ ಒದಗಿಸಲಾಗುತ್ತಿದೆ. ಅಗತ್ಯವಿರುವ ಕೆಲಸಕ್ಕೆ ಕನಿಷ್ಠ ವೇತನವನ್ನೂ ಒದಗಿಸದಿರುವುದೂ ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.