ಬೆಂಗಳೂರು: ಡೆಬಿಟ್ ಕಾರ್ಡ್ ಬದಲಿಸಿ ಹಣ ಡ್ರಾ ಮಾಡಿಕೊಂಡು ವಂಚಿಸಿದ್ದ ಆರೋಪಿ ಅರುಣ್ಕುಮಾರ್ (30) ಎಂಬಾತನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
‘ತುಮಕೂರು ಜಿಲ್ಲೆಯ ರಾಮಲಿಂಗಪುರದ ಅರುಣ್, ಹಲವು ವರ್ಷಗಳಿಂದ ಕೃತ್ಯ ಎಸಗುತ್ತಿದ್ದ. ಆತನಿಂದ 3.07 ಗ್ರಾಂ ಚಿನ್ನಾಭರಣ, ಮೊಬೈಲ್ ಹಾಗೂ ಡೇಬಿಟ್ ಕಾರ್ಡ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಹೇಳಿದರು.
‘ಎಟಿಎಂ ಘಟಕಗಳ ಬಳಿ ಆರೋಪಿ ನಿಲ್ಲುತ್ತಿದ್ದ. ಎಟಿಎಂ ಬಳಕೆ ಮಾಡಲು ಗೊತ್ತಿರದವರು, ಆತನ ಸಹಾಯ ಕೇಳುತ್ತಿದ್ದರು. ಸಹಾಯದ ಸೋಗಿನಲ್ಲಿ ಕಾರ್ಡ್ ಬದಲಿಸುತ್ತಿದ್ದ ಆರೋಪಿ, ಅದೇ ಕಾರ್ಡ್ ಬಳಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ. ಆತನ ವಿರುದ್ಧ ಶಿರಾ ಹಾಗೂ ಮಧುಗಿರಿ ಠಾಣೆಯಲ್ಲೂ ಪ್ರಕರಣಗಳು ದಾಖಲಾಗಿದ್ದವು’ ಎಂದೂ ತಿಳಿಸಿದರು.
‘ಬಾಗಲಕುಂಟೆ ಠಾಣೆ ವ್ಯಾಪ್ತಿಯ ನಾಗಸಂದ್ರದ ಮಂಜುನಾಥ ನಗರದಲ್ಲಿ ಇದೇ 10ರಂದು ಆರೋಪಿ ಕೃತ್ಯ ಎಸಗಿದ್ದ. ₹ 32,000 ಡ್ರಾ ಮಾಡಿಕೊಂಡು ವಂಚಿಸಿದ್ದ. ಆ ಬಗ್ಗೆ ದಾಖಲಾದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.