ಬೆಂಗಳೂರು: ‘ಆನ್ಲೈನ್ ಮೂಲಕ ಪರಿಚಯವಾಗಿದ್ದ ಜ್ಯೋತಿಷಿಯೊಬ್ಬ ಪೂಜೆ ನೆಪದಲ್ಲಿ ₹ 15 ಲಕ್ಷ ಪಡೆದುಕೊಂಡು ವಂಚಿಸಿದ್ದಾನೆ’ ಎಂದು ಆರೋಪಿಸಿ ಯುವತಿಯೊಬ್ಬರು ಪೂರ್ವ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
‘ವಂಚನೆ ಸಂಬಂಧ ಸುಬ್ಬನಪಾಳ್ಯ ನಿವಾಸಿಯಾದ 28 ವರ್ಷದ ಯುವತಿ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
ದೂರಿನ ವಿವರ: ‘ತಮ್ಮ ಭವಿಷ್ಯ ತಿಳಿದುಕೊಳ್ಳಲು ಇಚ್ಛಿಸಿದ್ದ ಯುವತಿ, ಜ್ಯೋತಿಷಿ ಮೊಬೈಲ್ ನಂಬರ್ಗಳಿಗಾಗಿ ಗೂಗಲ್ನಲ್ಲಿ ಹುಡುಕಾಡಿದ್ದರು. ಆರೋಪಿ ಜ್ಯೋತಿಷಿಯ ನಂಬರ್ ಸಿಕ್ಕಿತ್ತು. ಅದಕ್ಕೆ ಏಪ್ರಿಲ್ನಲ್ಲಿ ಕರೆ ಮಾಡಿದ್ದರು. ನಂತರ, ಹಲವರು ಬಾರಿ ಕರೆ ಮಾಡಿ ಮಾತನಾಡಿದ್ದರು’ ಎಂದು ಪೊಲೀಸರು ಹೇಳಿದರು.
‘ಯುವತಿಯ ಜನ್ಮ ದಿನಾಂಕ ಹಾಗೂ ಇತರೆ ವೈಯಕ್ತಿಕ ಮಾಹಿತಿ ಪಡೆದಿದ್ದ ಆರೋಪಿ, ‘ನಿಮಗೆ ಸಮಸ್ಯೆ ಇದೆ. ನಿಮ್ಮ ತಂದೆ-ತಾಯಿಗೆ ಹಾಗೂ ಮದುವೆಯಾಗಲಿರುವ ಹುಡುಗನಿಗೆ ಗಂಡಾಂತರವಿದೆ. ಇಡೀ ಕುಟುಂಬಕ್ಕೆ ಕಂಟಕವಿದ್ದು, ಪರಿಹಾರ ಪೂಜೆ ಮಾಡಿಸಬೇಕು. ಅದಕ್ಕೆ ₹15 ಲಕ್ಷ ಖರ್ಚಾಗುತ್ತದೆ’ ಎಂದಿದ್ದ.’
‘ಮಾತು ನಂಬಿದ್ದ ಯುವತಿ, ಹಂತ ಹಂತವಾಗಿ ₹ 15 ಲಕ್ಷವನ್ನು ಆತನ ಬ್ಯಾಂಕ್ ಖಾತೆಗೆ ಹಾಕಿದ್ದರು. ಹಣ ಪಡೆದ ನಂತರ ಆರೋಪಿಯೇ ನಾಪತ್ತೆಯಾಗಿದ್ದಾನೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.