ದಾಬಸ್ ಪೇಟೆ: ಸೋಂಪುರ ಹೋಬಳಿಯುದ್ದಕ್ಕೂ ನಾಲ್ಕೈದು ದಿನಗಳಿಂದ ಪೂರ್ವ ಮುಂಗಾರು ಹದವಾಗಿ ಬೀಳುತ್ತಿದ್ದು ರೈತರು ಹೊಲಗಳ ಉಳುಮೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಭರಣಿ ಮಳೆ ಬಿದ್ದರೆ ಧರಣಿ ತುಂಬಾ ಬೆಳೆ ಅನ್ನುವ ಮಾತಿದೆ. ಅದರಂತೆ ಭರಣಿ ಮಳೆ ಹೋಬಳಿಯಾದ್ಯಂತ ಬೀಳುತ್ತಿದ್ದು, ಈ ವರ್ಷ ಉತ್ತಮ ಬೆಳೆ ಆಗುತ್ತದೆ ಎನ್ನುವ ಆಶಯದಲ್ಲಿ ರೈತರ ಮೊಗದಲ್ಲಿ ಹರುಷ ಮೂಡಿಸಿದೆ.
ತೊಗರಿ, ಅವರೆ, ಅಲಸಂದೆ, ಮುಸುಕಿನ ಜೋಳ, ಕಡಲೆ ಕಾಯಿ ಇತ್ಯಾದಿ ಬೆಳೆಗಳನ್ನು ಪೂರ್ವ ಮುಂಗಾರಿನಲ್ಲಿ ಬಿತ್ತನೆ ಮಾಡಿದರೆ ಉತ್ತಮ ಫಸಲು ಸಿಗುತ್ತದೆನ್ನುವುದು ರೈತರ ನಿರೀಕ್ಷೆ.