ಬೆಂಗಳೂರು: ‘ಕವಿ ಡಾ.ಸಿದ್ದಲಿಂಗಯ್ಯ ಹೆಸರಿನಲ್ಲಿ ಸ್ಮಾರಕ ನಿರ್ಮಿಸಬೇಕು’ ಎಂದು ದಲಿತ ಸಂಘಟನೆಗಳ ಒಕ್ಕೂಟವು ಸರ್ಕಾರಕ್ಕೆ ಆಗ್ರಹಿಸಿದೆ.
‘ಸಿದ್ದಲಿಂಗಯ್ಯ ಅವರ ಹುಟ್ಟೂರುಮಂಚನಬೆಲೆಯಲ್ಲಿ ಕನಿಷ್ಠ ಎರಡು ಎಕರೆ ಪ್ರದೇಶದಲ್ಲಿ ಅವರ ಬೃಹತ್ ಸ್ಮಾರಕ ನಿರ್ಮಾಣ ಮಾಡಬೇಕು. ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ‘ಸಿದ್ದಲಿಂಗಯ್ಯ ಅಧ್ಯಯನ ಪೀಠ’ ಸ್ಥಾಪಿಸಬೇಕು’ ಎಂದು ಒಕ್ಕೂಟದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಒತ್ತಾಯಿಸಿದ್ದಾರೆ.
‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದಸಿದ್ದಲಿಂಗಯ್ಯ ಅವರ ಬರಹ ಹಾಗೂ ಭಾಷಣಗಳನ್ನು ಒಳಗೊಂಡ ಸಮಗ್ರ ಸಂಪುಟದ ಪುಸ್ತಕ ಪ್ರಕಟಿಸಬೇಕು. ಬೆಂಗಳೂರಿನ ಪ್ರಮುಖ ರಸ್ತೆಯೊಂದಕ್ಕೆ ಹಾಗೂ ಶ್ರೀರಾಮಪುರದ ಆರ್.ಜಿ.ಕಾಲೊನಿ ವೃತ್ತಕ್ಕೆಸಿದ್ದಲಿಂಗಯ್ಯ ಹೆಸರಿಡುವಂತೆ ಪಾಲಿಕೆಗೆ ಸೂಚಿಸಬೇಕು’.
‘ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಬೇಕು ಹಾಗೂ ‘ಪದ್ಮಶ್ರೀ’ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದೂ ಆಗ್ರಹಿಸಿದ್ದಾರೆ.