ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಶರಣರು: ನಾಗಮೋಹನದಾಸ್

‘ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ’ ಸಂವಾದ ಕಾರ್ಯಕ್ರಮ
Published 18 ಫೆಬ್ರುವರಿ 2024, 23:30 IST
Last Updated 18 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘12ನೇ ಶತಮಾನದಲ್ಲಿಯೇ ಶರಣರು ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಅನುಭವ ಮಂಟಪದ ಮೂಲಕ ಜಗತ್ತಿಗೆ ಸಾರಿದ್ದರು. ಶರಣರು ರಚಿಸಿದ ವಚನಗಳ ಸಾರ ನಮ್ಮ ಸಂವಿಧಾನದಲ್ಲಿ ಅಡಕವಾಗಿವೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಹೇಳಿದರು.

ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆ ಭಾನುವಾರ ಆಯೋಜಿಸಿದ್ದ ‘ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ’ ಅರಿವಿನ ಅನುಭಾವಿಗಳ ಅನುಭವ ಮಂಟಪದಲ್ಲಿ ಮುಕ್ತ ಸಂವಾದ ಎಂಬ ಕಾರ್ಯಕ್ರಮದಲ್ಲಿ ‘ಬಸವ ತತ್ವದ ಮೂಲ ಆಶಯವೇ ಸಂವಿಧಾನ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

‘ಬಸವತತ್ವದ ದರ್ಶನವನ್ನು ಇಡೀ ಜಗತ್ತಿಗೆ ಪ‍ರಿಚಯಿಸುವ ಉದ್ದೇಶದಿದಂದ ಸರ್ಕಾರ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಶ್ಲಾಘನೀಯ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯ ಚಟುವಟಿಕೆಗಳಲ್ಲಿ ಶರಣರ ವಚನಗಳು ಪ್ರತಿಧ್ವನಿಸಿದರೆ ಮಾತ್ರ ಬಸವಣ್ಣ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತೆ’ ಎಂದು ಅವರು ಹೇಳಿದರು.

‘ವಚನ ಸಾಹಿತ್ಯದಲ್ಲಿ ನಾವು ಮಾನವ ಹಕ್ಕುಗಳ ಪ್ರತಿಪಾದನೆಯನ್ನು ಕಾಣಬಹುದು. ಆದರೆ, ಇಂದು ಸರ್ಕಾರದಿಂದಲೇ ಈ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ದೇಶದಲ್ಲಿ ಇಂದು ಏನನ್ನೂ ಮಾತನಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ಆಶಯಗಳು ಧ್ವಂಸವಾಗುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ಸಂಸತ್ತಿನ ಶೇ 24 ರಷ್ಟು ಸಮಯ ಧರಣಿ, ಪ್ರತಿಭಟನೆಯಲ್ಲಿ ಕಳೆದು ಹೋಗಿದೆ. ಶೇ 47ರಷ್ಟು ಮಸೂದೆಗಳು ಚರ್ಚೆ ಇಲ್ಲದೇ ಮಂಡನೆಯಾಗಿವೆ. ಪ್ರಶ್ನೆ ಮಾಡಿದ 146 ಜನರನ್ನು ಸಂಸತ್ತಿನಿಂದ ಅಮಾನತ್ತು ಮಾಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಸಾಮಾಜಿಕ ಹೋರಾಟಗಾರ್ತಿ ಅಕ್ಕೈ ‍ಪದ್ಮಶಾಲಿ ಮಾತನಾಡಿ,‘ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ನಂಟು ಹೊಂದಿರುವ ಜೋಗತಿ ಮಂಜಮ್ಮ ಅವರು ಮೂಲಭೂತವಾದಿ ಆಗಿದ್ದಾರೆ. ನಮ್ಮ ಸಮುದಾಯವನ್ನು ಇಬ್ಭಾಗ ಮಾಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕುವೆಂಪು ಒಳಗಿನ ಬಸವಣ್ಣ’ ಕುರಿತು ಸಾಹಿತಿ ಕೆ.ವೈ. ನಾರಾಯಣಸ್ವಾಮಿ, ‘ಮಹಿಳಾ ಘನತೆ ಮತ್ತು ಸಮಾನತೆ ಸಾಧ್ಯವಾಗಿಸುವ ಬಸವತತ್ವ’ದ ಕುರಿತು ವಿಮರ್ಶಕಿ ಎಂ.ಎಸ್. ಆಶಾದೇವಿ, ‘ಸಮಸಮಾಜದ ನಿರ್ಮಾಣಕ್ಕೆ ಪ್ರಸ್ತುತ ಸಂದರ್ಭದಲ್ಲಿ ಬಸವಣ್ಣನವರ ಅಗತ್ಯ’ ಕುರಿತು ಸಾಹಿತಿ ಬಂಜಗೆರೆ ಜಯಪ್ರಕಾಶ್, ‘ಭಗವದ್ಗೀತೆ–ಖುರಾನ್–ಬೈಬಲ್‌ನಲ್ಲಿ ಬಸವತತ್ವದ ಆಶಯಗಳು’ ಕುರಿತು ಅರ್ಥಶಾಸ್ತ್ರಜ್ಞ ಟಿ.ಆರ್. ಚಂದ್ರಶೇಖರ್, ‘ಮತ್ತೆ ಕಲ್ಯಾಣ’ ವಿಷಯದ ಕುರಿತು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಜಿ.ಬಿ. ಪಾಟೀಲ ಮಾತನಾಡಿದರು. ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ದಿನೇಶ್ ಅಮೀನ್‌ ಮಟ್ಟು ಭಾಗವಹಿಸಿದ್ದರು.

ಸನಾತನ ಧರ್ಮವೆಂದರೆ ಹೆಣ್ಣುಮಕ್ಕಳಿಗೆ ಹಿಂಸೆ ನೀಡುವ ಮಹಿಳೆಯರನ್ನು ಇಬ್ಭಾಗ ಮಾಡುವ ಧರ್ಮ. ದಬ್ಬಾಳಿಕೆ ಮಾಡಿ ಅವರನ್ನು ಕೊಲ್ಲುವುದೇ ಸನಾತನ ಧರ್ಮ.
-ಅಕ್ಕೈ ‍ಪದ್ಮಶಾಲಿ, ಸಾಮಾಜಿಕ ಹೋರಾಟಗಾರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT