ಬೆಂಗಳೂರು: ನಗರದ ರಸ್ತೆಗಳಲ್ಲಿ ಒಣಗಿರುವ ಮರ, ಕೊಂಬೆಗಳ ಮಾಹಿತಿ ನೀಡಲು ಬಿಬಿಎಂಪಿ ಅರಣ್ಯ ವಿಭಾಗ ನಾಗರಿಕರಲ್ಲಿ ಮನವಿ ಮಾಡಿದೆ.
ಮಳೆ–ಗಾಳಿಯಿಂದ ನಗರದ ಹಲವೆಡೆ ಒಣಗಿರುವ ಮರ ಹಾಗೂ ಕೊಂಬೆಗಳು ಆಕಸ್ಮಿಕವಾಗಿ ಬೀಳುತ್ತಿವೆ. ಇದರಿಂದ ಸಾಕಷ್ಟು ಹಾನಿಯಾಗುತ್ತಿದೆ. ಆದ್ದರಿಂದ ನಾಗರಿಕರು ತಮ್ಮ ಸುತ್ತಮುತ್ತ ಕಂಡುಬರುವ ಒಣಗಿರುವ ಮರ ಹಾಗೂ ಕೊಂಬೆಗಳ ಮಾಹಿತಿಯನ್ನುಅರಣ್ಯ ವಿಭಾಗದ ಅಧಿಕಾರಿಗಳ ಮೊಬೈಲ್ಗೆ ಕರೆ ಮಾಡಿ ಅಥವಾ ವಾಟ್ಸ್ ಆ್ಯಪ್ನಲ್ಲಿ ಚಿತ್ರಸಹಿತ ವಿಳಾಸವನ್ನು ಕಳುಹಿಸಬೇಕು. ಅಪಾಯಕಾರಿ ಮರ, ಕೊಂಬೆಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ. ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಅಧಿಕಾರಿಗಳ ಸಂಪರ್ಕ: ಪೂರ್ವ ವಲಯ– 9380090027, ಪಶ್ಚಿಮ– 9449659252, ದಕ್ಷಿಣ– 94806885039, ದಾಸರಹಳ್ಳಿ– 9164042566, ಬೊಮ್ಮನಹಳ್ಳಿ– 9580685399, ಯಲಹಂಕ– 9164042566, ಆರ್.ಆರ್. ನಗರ– 7760553545, ಮಹದೇವಪುರ ವಲಯ– 8147276414.
ಉಚಿತ ಸಸಿ: ಬಿಬಿಎಂಪಿ ಅರಣ್ಯ ವಿಭಾಗದ ವತಿಯಿಂದ ಪರಿಸರ ಕಾಳಜಿ ಉತ್ತೇಜಿಸಲು ಸಸ್ಯ ಕ್ಷೇತ್ರಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ನಾಗರಿಕರು ಹಾಗೂ ಸಂಘ–ಸಂಸ್ಥೆಗಳು ಅರ್ಜಿ ಸಲ್ಲಿಸಿ ಸಸಿಗಳನ್ನು ಪಡೆಯಬಹುದು.