ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಮತ್ತು ಉದ್ಯೋಗಿಗಳ ಪಿಂಚಣಿ (ಇಪಿ) ಯೋಜನೆಯನ್ನು ಭಾರತದಲ್ಲಿರುವ ವಿದೇಶಿ ಕಾರ್ಮಿಕರಿಗೆ ವಿಸ್ತರಿಸಿ 2008ರಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ಹೈಕೋರ್ಟ್ ರದ್ದುಪಡಿಸಿದೆ.
ಈ ಸಂಬಂಧ ನಗರದ ‘ಸ್ಟೋನ್ ಹಿಲ್ ಪ್ರತಿಷ್ಠಾನ’ ಸೇರಿದಂತೆ 20ಕ್ಕೂ ಹೆಚ್ಚು ಅರ್ಜಿದಾರರ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ‘ಇದೊಂದು ಅಸಾಂವಿಧಾನಿಕ ಮತ್ತು ಸ್ವೇಚ್ಛೆಯ ಕ್ರಮ’ ಎಂದು ಸಾರಿದೆ.
‘ನಿರ್ದಿಷ್ಟ ಉದ್ಯೋಗಿಗಳಿಗೆ ರೂಪಿಸಲಾಗಿರುವ ಈ ಯೋಜನೆಯನ್ನು ಭಾರಿ ಹಣ ಸಂಪಾದಿಸುವ ಶ್ರೀಮಂತ ವಿದೇಶಿ ಉದ್ಯೋಗಿಗಳ ಅಗತ್ಯ ಪೂರೈಸಲು ಅನುಮತಿಸಲಾಗದು’ ಎಂದು ನ್ಯಾಯಪೀಠ ಹೇಳಿದೆ.
‘ಈ ಕುರಿತ ಕಾಯ್ದೆಯನ್ನು ಕಡಿಮೆ ವೇತನ ಪಡೆಯುವವರಿಗೆ ನಿವೃತ್ತಿಯ ಬಳಿಕ ಅನುಕೂಲವಾಗುವಂತೆ ರೂಪಿಸಲಾಗಿದೆಯೇ ವಿನಃ ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನ ಪಡೆಯುವವರಿಗಾಗಿ ಅಲ್ಲ’ ಎಂದು ನ್ಯಾಯಪೀಠ ವಿವರಿಸಿದೆ.
ಆಕ್ಷೇಪವೇನು?: ಅರ್ಜಿದಾರರು, 2008ರಲ್ಲಿ ಅಂತಾರಾಷ್ಟ್ರೀಯ ಉದ್ಯೋಗಿಗಳಿಗೆ ವಿಸ್ತರಿಸಿದ್ದ ಇಪಿಎಫ್ ಯೋಜನೆಯ ಖಂಡಿಕೆ 83 ಮತ್ತು ಇಪಿ ಯೋಜನೆಯ ಖಂಡಿಕೆ 43ಎ ಅನ್ನು ಪ್ರಶ್ನಿಸಿದ್ದರು.
‘ಭಾರತದಲ್ಲಿ ವಿದೇಶಿ ಉದ್ಯೋಗಿಗಳು ನಿರ್ದಿಷ್ಟ ಕಾಲಾವಧಿಗೆ ಮಾತ್ರ ಕಾರ್ಯ ನಿರ್ವಹಿಸುತ್ತಾರೆ. ಅವರ ಭವಿಷ್ಯ ನಿಧಿಗೆ ಹಣ ಸಂದಾಯ ಮಾಡುವುದರಿಂದ ನಮಗೆ ಹಾನಿಯಾಗುತ್ತದೆ. ವಿದೇಶಿ ಕೆಲಸಗಾರರು ಪ್ರತ್ಯೇಕ ವರ್ಗಕ್ಕೆ ಸೇರುತ್ತಾರೆ’ ಎಂದು ಪ್ರತಿಪಾದಿಸಿದ್ದರು.