ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಂಗ ನಿಂದನೆ ಬರಹ ಪ್ರಕಟಿಸಿ ಪ್ರಚೋದಿಸಿದ ಆರೋಪದಡಿ ನಟ ಚೇತನ್ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದೇ ಪ್ರಕರಣದಲ್ಲಿ ಚೇತನ್ ಅವರನ್ನು ಬಂಧಿಸಿರುವ ಪೊಲೀಸರು, ನ್ಯಾಯಾಧೀಶರ ಎದುರು ಹಾಜರುಪಡಿಸಲು ಕಾನೂನು ಪ್ರಕ್ರಿಯೆ ಆರಂಭಿಸಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಚೇತನ್ ಅವರನ್ನು ಮನೆಯಲ್ಲಿ ವಶಕ್ಕೆ ಪಡೆದಿದ್ದ ಪೊಲೀಸರು, ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದರು. ಶೇಷಾದ್ರಿಪುರ ಠಾಣೆಗೆ ಬಂದಿದ್ದ ಚೇತನ್ ಪತ್ನಿ ಮೇಘಾ, ‘ಇದೊಂದು ಅಪಹರಣ’ ಎಂದು ಆರೋಪಿಸಿದರು.
ಚೇತನ್ ಬಂಧನದ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು, ‘ನ್ಯಾಯಾಂಗವನ್ನು ನಿಂದಿಸಿದ ಬರಹ ಪ್ರಕಟಿಸಿ, ಜನರನ್ನು ಪ್ರಚೋದಿಸಿದ ಆರೋಪ ಚೇತನ್ ಮೇಲಿದೆ. ಕಾನೂನಿನ ಪ್ರಕಾರವೇ ಅವರನ್ನು ವಶಕ್ಕೆ ಪಡೆದು, ಬಂಧಿಸಲಾಗಿದೆ’ ಎಂದರು.
ಶೇಷಾದ್ರಿಪುರ ಪೊಲೀಸರೇ ಮನೆಗೆ ಹೋಗಿ ಚೇತನ್ ಅವರನ್ನು ಬಂಧಿಸಿ ಕರೆತಂದಿದ್ದಾರೆ. ಚೇತನ್ ಅವರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸದ್ಯದಲ್ಲೇ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು ಎಂದೂ ಹೇಳಿದರು.