ಬೆಂಗಳೂರು: ಕಾಮಾಕ್ಷಿಪಾಳ್ಯದ ತೋಟದ ರಸ್ತೆಯಲ್ಲಿರುವ ವಿನಾಯಕ್ ಹೋಟೆಲ್ನಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಹೋಟೆಲ್ ಮಾಲೀಕರಾದ ರಾಜಣ್ಣ (56), ಗಾಯತ್ರಿ (51), ಕೆಲಸಗಾರ ಭಾಸ್ಕರ್ ಹಾಗೂ ಗ್ರಾಹಕ ಗಂಗರಾಜು ಗಾಯಗೊಂಡವರು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಸಣ್ಣ ಶೆಡ್ ಹಾಕಿಕೊಂಡು ರಾಜಣ್ಣ ಹಾಗೂ ಕುಟುಂಬದವರು ಹೋಟೆಲ್ ನಡೆಸುತ್ತಿದ್ದರು. ಶನಿವಾರ ನಸುಕಿನಲ್ಲಿ ಹೋಟೆಲ್ನ ಬಾಗಿಲು ತೆರೆಯಲಾಗಿತ್ತು.ಬೆಳಿಗ್ಗೆಯಿಂದಲೇ ಗ್ರಾಹಕರು ಹೋಟೆಲ್ಗೆ ಬಂದು ಹೋಗುತ್ತಿದ್ದರು. ಬೆಳಿಗ್ಗೆ 11.30ರ ಸುಮಾರಿಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಹೋಟೆಲ್ ಮಾಲೀಕರು ಸೇರಿ ಗ್ರಾಹಕರು ಗಾಯಗೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಅನಿಲ ಸಿಲಿಂಡರ್ ಜೊತೆಯಲ್ಲೇ ಸೌದೆ ಒಲೆಯನ್ನೂ ಅಡುಗೆ ಮಾಡಲು ಬಳಸಲಾಗುತ್ತಿತ್ತು. ಶನಿವಾರವೂ ಒಂದೆಡೆ ಸೌದೆ ಒಲೆ ಉರಿಯುತ್ತಿತ್ತು. ಅತ್ತ, ಸಿಲಿಂಡರ್ನಿಂದ ಅನಿಲ ಸೋರಿಕೆಯಾಗುತ್ತಿತ್ತು. ಅದನ್ನು ಗಮನಿಸಿದ್ದ ಕೆಲಸಗಾರ, ಸಿಲಿಂಡರ್ ರೆಗ್ಯುಲೇಟರ್ ಸರಿಪಡಿಸಲು ಹೋದಾಗ ಬೆಂಕಿ ಹೊತ್ತಿಕೊಂಡಿತ್ತು.’
‘ಸೌದೆಯ ಒಲೆಯ ಬೆಂಕಿ ಜೊತೆ ಅನಿಲ ಸೇರಿ ಅವಘಡ ಸಂಭವಿಸಿದೆ. ಹೋಟೆಲ್ ಒಳಾಂಗಣದಲ್ಲಿ ಬೆಂಕಿ ಹೊತ್ತಿ ಉರಿದಿದೆ. ಪೀಠೋಪಕರಣ ಹಾಗೂ ಅಡುಗೆ ತಯಾರಿ ಸಾಮಗ್ರಿಗಳು ಸುಟ್ಟು ಹೋಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು’ ಎಂದೂ ಪೊಲೀಸರು ತಿಳಿಸಿದರು.