ಬೆಂಗಳೂರು: 'ಮಹಾತ್ಮ ಗಾಂಧೀಜಿ ಅವರನ್ನು ಆರ್ಎಸ್ಎಸ್ ಮೂಲದವರೇಹತ್ಯೆ ಮಾಡಿದ್ದಾರೆ' ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಬಾ-ಬಾಪು 150ನೇ ಜನ್ಮ ವರ್ಷಾಚರಣೆ ಸರ್ವೋದಯ ದಿನಾಚರಣೆ, ಕಾಲೇಜು ಪ್ರಾಧ್ಯಾಪಕರಿಗಾಗಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಗಾಂಧಿ ಹಂತಕ ಗೋಡ್ಸೆ, ಗಾಂಧಿಯನ್ನು ಹತ್ಯೆಗೈಯುವ 15ದಿನಗಳಿಗಿಂತ ಮೊದಲುಬೆಂಗಳೂರಿಗೆ ಬಂದಾಗ ಆರ್ಎಸ್ಎಸ್ ಸಂಘಟಕರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರೆಂದರೆ ಇದು ಸಂಘ ಪರಿವಾರದ ಕೃತ್ಯವಲ್ಲವೇ? ' ಎಂದು ಪ್ರಶ್ನಿಸಿದರು.
'ಆದರೆ, ಸಂಘ ಪರಿವಾರ ಗೋಡ್ಸೆ ನಮ್ಮವನಲ್ಲ ಎಂದು ಹೇಳುತ್ತಿದೆ. ಬಿಜೆಪಿಯವರು ಹಲಕಾ ಕೆಲಸ ಮಾಡುತ್ತಿದ್ದಾರೆ' ಎಂದು ದೂರಿದರು.
'ಸರ್ಕಾರ ನಾಚಿಕೆಗೇಡಿ ಕೆಲಸ ಮಾಡುತ್ತಿದೆ. ಮದ್ಯಪಾನ ನಿಷೇಧಕ್ಕಾಗಿ ಪಾದಯಾತ್ರೆ ಹೊರಟು ಬಂದವರಿಗೆ ಸಾಂತ್ವನ, ಭರವಸೆ ಹೇಳದೆ 'ಅಧಿಕಾರದಲ್ಲಿ ನಾನಿದ್ದಾಗಲೇ ಹೋರಾಟ ಮಾಡಬೇಕಿತ್ತಾ' ಎಂದು ಪ್ರಶ್ನಿಸುವ ರೀತಿ ಅವರಿಗೆ ಶೋಭೆ ತರುವಂಥದಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಗಾಂಧಿ ಹತ್ಯೆ ಇಂದಿಗೂ ನೋವುಂಟು ಮಾಡುತ್ತಿದೆ. ಹಂತಕ ಶಕ್ತಿಗಳು ಅಲ್ಲಲ್ಲಿ ರಾರಾಜಿಸುತ್ತಿವೆ. ಕೋಮುವಾದ, ಹಿಂಸಾತ್ಮಕ ಮನಸ್ಸುಗಳನ್ನು ಖಂಡಿಸಬೇಕು' ಎಂದು ವೊಡೇ ಪಿ.ಕೃಷ್ಣ ಹೇಳಿದರು.
ವೇಮುಗಲ್ ಸೋಮಶೇಖರ್ ವಿರಚಿತ 'ಮಹದೇವ ದೇಸಾಯಿ', ಗಾಂಧೀಜಿ ಅವರ 'ಖಾದಿ ಗ್ರಾಮೋದ್ಯೋಗ', ಹಾಸ್ಯ ಮತ್ತು ಗಾಂಧಿ ಸೇರಿದಂತೆ 8ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ನಡೆದಾಡುವ ಮಹಾತ್ಮ ಗಾಂಧಿ- ವೇಮಗಲ್ ಸೋಮಶೇಖರ್, ಹಿರಿಯ ಕರಡು ತಿದ್ದುಪಡಿಗಾರ ಎಸ್.ಕೆ.ಇಂದ್ರಕುಮಾರ್ ಅವರನ್ನು ಗೌರವಿಸಲಾಯಿತು.
ಶೇಷಾದ್ರಿಪುರ ಕಾಲೇಜು ಸೇರಿದಂತೆವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.