ಬೆಂಗಳೂರು: ಮಕರ ಸಂಕ್ರಾಂತಿಯ ದಿನವಾದ ಭಾನುವಾರ ಸೂರ್ಯ ತನ್ನ ಪಥ ಬದಲಿಸುವ ಸಂದರ್ಭದಲ್ಲಿ ಭಾಸ್ಕರನ ರಶ್ಮಿ ಗವಿಪುರದಲ್ಲಿರುವ ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗವನ್ನು 3 ನಿಮಿಷ 12 ಸೆಕೆಂಡ್ಗಳಷ್ಟು ಸ್ಪರ್ಶಿಸಿತು.
ಈ ಕ್ಷಣಕ್ಕೆ ಸಾವಿರಾರು ಭಕ್ತಾದಿಗಳು ಸಾಕ್ಷಿಯಾದರು. ದೇಗುಲದ ಬಲಭಾಗದ ಕಿಂಡಿಯಿಂದ ಸಂಜೆ 5.20ರ ವೇಳೆಗೆ ಸೂರ್ಯರಶ್ಮಿ ಪ್ರವೇಶಿಸಿತು. ಮೊದಲು ಗವಿಗಂಗಾಧರೇಶ್ವರ ದೇವರ ಪಾದ ಸ್ಪರ್ಶಿಸಿತು. ಬಳಿಕ ನಂದಿ ವಿಗ್ರಹದ ಮೂಲಕ ಹಾದುಹೋದ ಸೂರ್ಯಕಿರಣಗಳು, ಇಡೀ ಶಿವಲಿಂಗವನ್ನು ಆವರಿಸಿದವು. ಈ ಅವಧಿಯಲ್ಲಿ ದೇವರಿಗೆ ನಿರಂತರವಾಗಿ ಅಭಿಷೇಕ ನಡೆಸಲಾಯಿತು.
ಸೂರ್ಯರಶ್ಮಿ ದೇವರನ್ನು ಸ್ಪರ್ಶಿಸಿ ಮರೆಯಾದ ನಂತರ ಮತ್ತೊಮ್ಮೆ ದೇವರಿಗೆ ಅಭಿಷೇಕ ಮಾಡಿ, ಪೂಜೆ ನಡೆಸಲಾಯಿತು. ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ಅವಧಿಯಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ದೇವಾಲಯದ ಹೊರಗಡೆ ವಿಶೇಷ ಎಲ್ಇಡಿ ಪರದೆಯಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಸೂರ್ಯರಶ್ಮಿ ಶಿವಲಿಂಗ ಸ್ಪರ್ಶಿಸಿ ಮರೆಯಾದ ಬಳಿಕ ಗಂಗಾಜಲವನ್ನು ಪ್ರೋಕ್ಷಣೆ ಮಾಡಿ, ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು. ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
20 ಸಾವಿರಕ್ಕೂ ಹೆಚ್ಚು ಭಕ್ತರು: ನಗರದ ನಾನಾ ಭಾಗಗಳಿಂದ 20 ಸಾವಿರಕ್ಕೂ ಹೆಚ್ಚು ಭಕ್ತರು ಬಂದಿದ್ದರು. ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುವಾಗ ಶಿವನಾಮ ಪಠಿಸಿದರು. ಬಳಿಕ ಸರತಿಸಾಲಿನಲ್ಲಿ ನಿಂತು, ದೇವರ ದರ್ಶನ ಪಡೆದರು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಾನುವಾರ ಮುಂಜಾನೆಯೇ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಭಕ್ತರ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಬಂದಿತ್ತು. ಜನರು ಸರದಿ ಸಾಲಿನಲ್ಲಿ ನಿಂತು, ಗಂಗಾಧರೇಶ್ವರನ ದರ್ಶನ ಪಡೆದರು. ಮುಂಜಾನೆ 5ರಿಂದ ಮಧ್ಯಾಹ್ಮ 12ರವರೆಗೆ ಭಕ್ತರಿಗೆ ಸುಗಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.