ಬೆಂಗಳೂರು: ‘ಇದು, ವಾಹನ ಹಾಗೂ ಜನಸಂಚಾರಕ್ಕೆ ಯೋಗ್ಯ ರಸ್ತೆಯಲ್ಲ. ಕಲ್ಲು-ಮಣ್ಣಿನ ಈ ರಸ್ತೆಯಲ್ಲಿ ಮಳೆ ಬಿದ್ದರೆ, ಹೆಜ್ಜೆ ಇಡಲೂ ಆಗುವುದಿಲ್ಲ. ರಸ್ತೆ ಸರಿಪಡಿಸುವಂತೆ ಪಾಲಿಕೆಗೆ ಒಂದು ವರ್ಷದಿಂದ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’
ರಾಜರಾಜೇಶ್ವರಿ ನಗರದ ಗಿರಿಧಾಮ ಬಡಾವಣೆ ನಿವಾಸಿಗಳ ಅಳಲು ಇದು.
‘ಬಡಾವಣೆಯಲ್ಲಿ 48ಕ್ಕೂ ಹೆಚ್ಚು ಮನೆಗಳಿವೆ. ಡಾಂಬರು ಕಾಣದೆ, ಹದಗೆಟ್ಟಿರುವ ಈ ರಸ್ತೆಯಲ್ಲಿ ಓಡಾಡಲೂ ಇಲ್ಲಿನ ಜನ ಹೆದರುತ್ತಾರೆ. ವೃದ್ಧರು ಹಾಗೂ ಮಕ್ಕಳು ಈ ರಸ್ತೆಯಲ್ಲಿ ಸಂಚರಿಸುವುದಾದರೂ ಹೇಗೆ’ ಎಂದು ಬಡಾವಣೆಯ ನಿವಾಸಿ ಜೋಸೆಫ್ ಹೂವರ್ ಬೇಸರ ವ್ಯಕ್ತಪಡಿಸಿದರು.
'ತೆರಿಗೆಯನ್ನು ತಪ್ಪದೆ ಕಟ್ಟಿಸಿಕೊಳ್ಳುವ ಪಾಲಿಕೆ, ಸೂಕ್ತ ರಸ್ತೆ ವ್ಯವಸ್ಥೆಯನ್ನು ಏಕೆ ಮಾಡುತ್ತಿಲ್ಲ. ರಸ್ತೆ ಸರಿಪಡಿಸಿ ಎಂದು ವರ್ಷಗಟ್ಟಲೆ ಕಚೇರಿಗೆ ಅಲೆದರೂ ಪ್ರಯೋಜನವಾಗಲಿಲ್ಲ. ಪಾಲಿಕೆ ವತಿಯಿಂದ ನಿನ್ನೆ ಒಂದು ಟ್ರಾಕ್ಟರ್ನಲ್ಲಿ ಕಸ ತುಂಬಿಕೊಂಡಿರುವ ಮಣ್ಣನ್ನು ತಂದು ರಸ್ತೆಯ ಅಲ್ಲಲ್ಲಿ ಮಾತ್ರ ಹಾಕಿದ್ದಾರೆ. ಅದೂ ಅಪೂರ್ಣವಾಗಿದೆ. ಇದು ರಸ್ತೆಗೆ ಹಾಕಬೇಕಾದ ಮಣ್ಣಲ್ಲ. ನಿವಾಸಿಗಳಿಗೆ ಇದರಿಂದ ಸಮಸ್ಯೆಯೇ ಹೆಚ್ಚು' ಎಂದು ದೂರಿದರು.
ಸ್ಥಳೀಯ ನಿವಾಸಿ ಪ್ರವೀಣ್ ಯಶಸ್, 'ಜನರಿಂದ ತೆರಿಗೆ ಪಾವತಿಸಿಕೊಂಡು, ಈ ರೀತಿ ಬೇಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿರುವ ಪಾಲಿಕೆ ಕ್ರಮ ಸರಿಯಿಲ್ಲ. ದುರಸ್ತಿ ಬಿಟ್ಟು, ಇರುವ ರಸ್ತೆಯನ್ನೂ ಹಾಳು ಮಾಡುತ್ತಿದ್ದಾರೆ. ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕು' ಎಂದು ಒತ್ತಾಯಿಸಿದರು.