ಬೆಂಗಳೂರು: ಬೆಳ್ಳಂದೂರು ಬಳಿಯ ರಾಜಕಾಲುವೆಯಲ್ಲಿ ಬಿದ್ದು ಕೊಚ್ಚಿ ಹೋಗಿರುವ ಮೊನಾಲಿಕಾ ಎಂಬ ಆರು ವರ್ಷದ ಬಾಲಕಿ ಶನಿವಾರವೂ ಪತ್ತೆಯಾಗಿಲ್ಲ. ಆಕೆಗಾಗಿ ಭಾನುವಾರವೂಹುಡುಕಾಟ ಮುಂದುವರಿಯಲಿದೆ.
ಶುಕ್ರವಾರ ಮಧ್ಯಾಹ್ನ ಬಾಲಕಿ ಕಾಲುವೆಗೆ ಬಿದ್ದಿದ್ದಾಳೆ. ರಾತ್ರಿವರೆಗೂ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಬಾಲಕಿ ಪತ್ತೆಯಾಗಿರಲಿಲ್ಲ. ಕತ್ತಲಾಗಿದ್ದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ಶನಿವಾರ ಬೆಳಿಗ್ಗೆ ಪುನಃ ಕಾರ್ಯಾಚರಣೆ ಆರಂಭಿಸಲಾಯಿತು. ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಸಹ ಸ್ಥಳಕ್ಕೆ ಬಂದು ಕಾರ್ಯಾಚರಣೆ ಮುಂದುವರಿಸಿದರು. ರಾತ್ರಿಯಾದರೂ ಬಾಲಕಿ ಪತ್ತೆಯಾಗಲಿಲ್ಲ. ಕತ್ತಲಿನ ಕಾರಣ ಪುನಃ ಕಾರ್ಯಾಚರಣೆಯನ್ನು ಸ್ಥಗಿತ ಮಾಡಲಾಗಿದೆ. ಭಾನುವಾರ ಬೆಳಿಗ್ಗೆ ಕಾರ್ಯಾಚರಣೆ ಪುನಃ ಆರಂಭವಾಗಲಿದೆ.
‘ರಾಜಕಾಲುವೆಯಲ್ಲಿ ನೀರು ಹೆಚ್ಚಿದ್ದು, ಆಳವೂ ಜಾಸ್ತಿ ಇದೆ. ಕಸ ಹಾಗೂ ಹೂಳು ತುಂಬಿಕೊಂಡಿದ್ದು, ಹೀಗಾಗಿ ಬಾಲಕಿ ಪತ್ತೆ ಕಷ್ಟವಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.