ವಿಧಾನಸಭೆ: ಬೆಂಗಳೂರಿನ ಕಣ್ವ ಸೌಹಾರ್ದ ಸಹಕಾರಿ ಸಂಸ್ಥೆ ಮತ್ತು ಕಣ್ವ ಸಮೂಹವು ಠೇವಣಿದಾರರಿಂದ ಹಣ ಸಂಗ್ರಹಿಸಿ ₹800 ಕೋಟಿ ವಂಚಿಸಿರುವ ಆರೋಪದ ಕುರಿತ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂಬ ಬೇಡಿಕೆಯನ್ನು ಪರಿಶೀಲಿಸಿ, ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ಬಿಜೆಪಿಯ ಎಲ್.ಎ. ರವಿಸುಬ್ರಮಣ್ಯ ಅವರ ಗಮನ ಸೆಳೆಯುವ ಸೂಚನೆಗೆ ಗುರುವಾರ ಉತ್ತರಿಸಿದ ಸಚಿವರು, ‘ಕಣ್ವ ಸೌಹಾರ್ದ ಸಹಕಾರಿ ಸಂಸ್ಥೆ ಮತ್ತು ಕಣ್ವ ಸಮೂಹದ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಂದಿನ ಕ್ರಮದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.
ಗುರು ರಾಘವೇಂದ್ರ ಸೌಹಾರ್ದ ಸಹಕಾರ ಸಂಸ್ಥೆ ಹಾಗೂ ವಶಿಷ್ಠ ಸಹಕಾರ ಬ್ಯಾಂಕ್ಗಳಿಗೆ ಆಡಳಿತ ಮಂಡಳಿಗಳನ್ನು ನೇಮಿಸಬೇಕು ಎಂದು ರವಿಸುಬ್ರಮಣ್ಯ ಆಗ್ರಹಿಸಿದರು.
‘ಈ ಎರಡೂ ಸಹಕಾರ ಸಂಸ್ಥೆಗಳ ಹಗರಣಗಳ ಕುರಿತು ಸಿಬಿಐ ತನಿಖೆ ನಡೆಯುತ್ತಿದೆ. ಎರಡೂ ಸಂಸ್ಥೆಗಳನ್ನು ರಿಸರ್ವ್ ಬ್ಯಾಂಕ್ ವಶಕ್ಕೆ ಪಡೆದಿದೆ. ಈ ಹಂತದಲ್ಲಿ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ’ ಎಂದು ಸಚಿವರು ಉತ್ತರಿಸಿದರು.