ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 10,000 ಸಾಲಕ್ಕಾಗಿ ಚಪ್ಪಲಿಯೇಟು; ನಡುರಸ್ತೆಯಲ್ಲೇ ಮಹಿಳೆ ಹತ್ಯೆ

Last Updated 28 ಫೆಬ್ರುವರಿ 2021, 21:02 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ಅಲೀಮಾ ಬೇಬಿ (35) ಅವರನ್ನು ಹತ್ಯೆ ಮಾಡಲಾಗಿದ್ದು, ಕೃತ್ಯದ ಬಳಿಕ ಆರೋಪಿ ರಫೀಕ್ ಪರಾರಿಯಾಗಿದ್ದಾನೆ.

‘ಕೊಲ್ಕತ್ತಾದ ಅಲೀಮಾ ಬೇಬಿ, ನಗರದಲ್ಲಿ ಮನೆ ಕೆಲಸ ಮಾಡುತ್ತಿದ್ದರು. ಅವರ ಸಂಬಂಧಿಯೇ ಆಗಿರುವ ರಫೀಕ್‌ ಈ ಕೊಲೆ ಮಾಡಿದ್ದು, ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಆತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಲೀಮಾ ಹಾಗೂ ರಫೀಕ್ ಒಂದೇ ಊರಿನವರು. ಅವರಿಬ್ಬರು ಆಗಾಗ ಭೇಟಿಯಾಗುತ್ತಿದ್ದರು. ಕಳೆದ ವರ್ಷ ಅಲೀಮಾ ಅವರಿಗೆ ರಫೀಕ್ ₹ 10,000 ಸಾಲ ನೀಡಿದ್ದ. ಅದನ್ನು ಮಹಿಳೆ ವಾಪಸು ನೀಡಿರಲಿಲ್ಲ. ಈ ಸಂಬಂಧ ಹಲವು ಬಾರಿ ಜಗಳವೂ ಆಗಿತ್ತು.’

‘ಇತ್ತೀಚೆಗೆ ಅಲೀಮಾ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿದ್ದ ರಫೀಕ್, ಹಣ ನೀಡುವಂತೆ ಪಟ್ಟು ಹಿಡಿದಿದ್ದ. ಹಣವಿಲ್ಲವೆಂದು ಹೇಳಿದ್ದ ಅಲೀಮಾ, ಆತನಿಗೆ ಚಪ್ಪಲಿಯಿಂದ ಹೊಡೆದಿದ್ದರು. ಕೋಪಗೊಂಡಿದ್ದ ರಫೀಕ್, ‘ಕೊಟ್ಟ ಸಾಲ ವಾಪಸು ಕೇಳಿದ್ದಕ್ಕೆ ಜನರ ಎದುರೇ ಚಪ್ಪಲಿಯಿಂದ ಹೊಡೆದು ಅವಮಾನ ಮಾಡುತ್ತಿಯಾ. ನಿನ್ನನ್ನು ಸುಮ್ಮನೇ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿ ಸ್ಥಳದಿಂದ ಹೊರಟು ಹೋಗಿದ್ದ. ಈ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಕಾದು ಕುಳಿತು ಹತ್ಯೆ: ‘ಅಲೀಮಾ ನಿತ್ಯವೂ ನಸುಕಿನಲ್ಲಿ ಬ್ರೂಕೆ ಫೀಲ್ಡ್ ಎರಡನೇ ಹಂತದ ರಸ್ತೆ ಮೂಲಕ ನಡೆದುಕೊಂಡು ಮನೆ ಕೆಲಸಕ್ಕೆ ಹೋಗುತ್ತಿದ್ದರು. ಅದನ್ನು ತಿಳಿದುಕೊಂಡಿದ್ದ ಆರೋಪಿ, ಅದೇ ರಸ್ತೆಯಲ್ಲಿ ಭಾನುವಾರ ನಸುಕಿನಲ್ಲಿ ಕಾಯುತ್ತ ಕುಳಿತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಡುರಸ್ತೆಯಲ್ಲೇ ಅಲೀಮಾರನ್ನು ಅಡ್ಡಗಟ್ಟಿದ್ದ ಆರೋಪಿ, ಚಾಕುವಿನಿಂದ ಕತ್ತು ಕೊಯ್ದಿದ್ದ. ಮಹಿಳೆ ಕುಸಿದು ಬಿದ್ದಿದ್ದರು. ನಂತರವೂ ಹಲವು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT