ಬೆಂಗಳೂರು: ಆಟೊ ಚಾಲನೆ ವೇಳೆ ಹೃದಯಾಘಾತ ಸಂಭವಿಸಿ ಚಾಲಕ ತಿಮ್ಮೇಶ್ (53) ಎಂಬುವವರು ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಮಂಡ್ಯದ ತಿಮ್ಮೇಶ್ ಅವರು ಬಿಳೇಕಹಳ್ಳಿಯ ಸೋಮೇಶ್ವರ ಬಡಾವಣೆಯಲ್ಲಿ ನೆಲೆಸಿದ್ದರು.
ಮಂಗಳವಾರ ಎಂದಿನಂತೆಯೇ ಮನೆಯಿಂದ ಆಟೊವನ್ನು ತೆಗೆದುಕೊಂಡು ಬಾಡಿಗೆಗೆ ತೆರಳಿದ್ದರು. ಸಂಪಂಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ 8ನೇ ಮುಖ್ಯರಸ್ತೆಯಲ್ಲಿ ಆಟೊ ಚಾಲನೆ ಮಾಡಿಕೊಂಡು ತೆರಳುತ್ತಿದ್ದ ವೇಳೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರು ಆಟೊವನ್ನು ರಸ್ತೆಯ ಬದಿಗೆ ನಿಲುಗಡೆ ಮಾಡಿ ಕುಸಿದು ಬಿದ್ದು ಮೃತಪಟ್ಟಿದ್ಧಾರೆ. ಅಕ್ಕಪಕ್ಕದ ಮಳಿಗೆಗಳಲ್ಲಿ ಅಳವಡಿಸಿದ್ದ ಸಿಸಿಟಿ.ವಿ ಕ್ಯಾಮೆರಾದಲ್ಲಿ ಚಾಲಕ ಎದೆನೋವಿನಿಂದ ನರಳಾಟ ನಡೆಸುವುದು ಹಾಗೂ ಕುಸಿದು ಬೀಳುವ ದೃಶ್ಯಾವಳಿ ಸೆರೆಯಾಗಿದೆ.
ಕುಟುಂಬಸ್ಥರ ಕಣ್ಣೀರು
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಕುಟುಂಬಸ್ಥರು ತಿಮ್ಮೇಶ್ ಅವರನ್ನು ನೆನೆದು ಕಣ್ಣೀರು ಹಾಕಿದರು.
‘ಬೆಳಿಗ್ಗೆ ಆರೋಗ್ಯವಾಗಿಯೇ ಇದ್ದರು. ಆಟೊವನ್ನು ಅವರೇ ಚಲಾಯಿಸಿಕೊಂಡು ಹೋಗಿದ್ದರು’ ಎಂದು ಕುಟುಂಬದ ಸದಸ್ಯರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.