ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಂದು ಹೇಳಿಕೊಂಡು ಮಹಿಳೆಯರಿಂದ ₹ 20 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಂಚನೆಗೀಡಾಗಿರುವ ಮಹಿಳೆಯರು ಡಿ. 6ರಂದು ದೂರು ನೀಡಿದ್ದಾರೆ. ಅದರನ್ವಯ ಆರೋಪಿಗಳಾದ ಎಂ.ಸಿ.ನಾಗರಾಜ್ ಹಾಗೂ ಜಗದೀಶ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಚನ್ನಗಿರಿ ತಾಲ್ಲೂಕಿನ ಚಿಕ್ಕೋಲಿಕೆರೆ ಗ್ರಾಮದ ಜಗದೀಶ್, ಪರಿಚಯಸ್ಥ ಮಹಿಳೆಯೊಬ್ಬರಿಗೆ ಸರ್ಕಾರದ ಯೋಜನೆಗಳಡಿ ಸೌಲಭ್ಯ ಕಲ್ಪಿಸುವುದಾಗಿ ಹೇಳಿದ್ದರು. ಎಂ.ಸಿ.ನಾಗರಾಜ್ ಅವರನ್ನೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಂದು ಹೇಳಿ ಮಹಿಳೆಗೆ ಪರಿಚಯ ಮಾಡಿಸಿದ್ದರು.’
‘ಸರ್ಕಾರದ ವಿವಿಧ ಯೋಜನೆಗಳಡಿ ತಲಾ ₹8 ಲಕ್ಷ ಕೊಡಿಸುವುದಾಗಿ ಹೇಳಿದ್ದ ಆರೋಪಿಗಳು, ಅದಕ್ಕಾಗಿ ಏಳು ಮಹಿಳೆಯರಿಂದ ₹ 20 ಲಕ್ಷ ಪಡೆದುಕೊಂಡಿದ್ದರು. ಅದಾದ ನಂತರ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.