ಬೆಂಗಳೂರು: ನ್ಯಾಯಾಲಯದ ಕಲಾಪದಿಂದ ದೂರ ಉಳಿದಿದ್ದ ದಾವಣಗೆರೆ ಮತ್ತು ಮಂಡ್ಯ ಜಿಲ್ಲೆಯ ವಕೀಲರ ಸಂಘಗಳ ವಿರುದ್ಧ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹಿಂಪಡೆಯುವಂತೆ ಬೆಂಗಳೂರು ವಕೀಲರ ಸಂಘವು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರಿಗೆ ಮನವಿ ಮಾಡಿದೆ.
‘ವಕೀಲರು(ಬಾರ್) ಮತ್ತು ನ್ಯಾಯಮೂರ್ತಿಗಳು(ಪೀಠ) ನ್ಯಾಯಾಂಗದ ಎರಡು ಚಕ್ರಗಳಿದ್ದಂತೆ. ಒಂದಿಲ್ಲದೆ ಮತ್ತೊಂದು ಚಲಿಸುವುದಿಲ್ಲ. ನ್ಯಾಯಾಂಗದ ಮುಖ್ಯಸ್ಥರಾಗಿರುವ ತಾವು ಎರಡರ ನಡುವೆ ಸಮತೋಲವನ್ನು ಕಾಪಾಡಿಕೊಂಡು ಮುನ್ನಡೆಸಬೇಕು. ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದು ಆಕ್ರಮಣ ಎನಿಸಿಕೊಳ್ಳುತ್ತದೆ. ಹೀಗಾಗಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಬೇಕು’ ಎಂದು ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಮತ್ತು ಪ್ರಧಾನ ಕಾರ್ಯದರ್ಶಿ ಎ.ಎನ್. ಗಂಗಾಧರಯ್ಯ ಕೋರಿದ್ದಾರೆ.
ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ಕೆ.ಆರ್.ಪೇಟೆ ಮತ್ತು ದಾವಣಗೆರೆ ವಕೀಲರ ಸಂಘಗಳು ವಿವಿಧ ಕಾರಣಗಳಿಂದ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ಆರು ಸಂಘಗಳ ಪದಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು.