ಬೆಂಗಳೂರು: ಬೆಳ್ಳಂದೂರು ಪ್ರದೇಶದಲ್ಲಿ ಗುಡಿಸಿಲುಗಳನ್ನು ನಾಶ ಮಾಡಿದ್ದ ಪ್ರಕರಣದ ಸಂಬಂಧ 351 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಸಮಗ್ರ ಯೋಜನೆಯನ್ನು ಸರ್ಕಾರ ಆರಂಭಿಸದಿದ್ದರೆ ಅವಿದೆಯತೆ ವಿಚಾರಣೆ ಆರಂಭಿಸಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಕೋವಿಡ್ ಕಾರಣಕ್ಕೆ ಯೋಜನೆ ಸಿದ್ಧಪಡಿಸಲು ವಿಳಂಬವಾಗುತ್ತಿದೆ ಎಂಬ ರಾಜ್ಯ ಸರ್ಕಾರದ ಉತ್ತರಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಎಲ್ಲಾ ಯೋಜನೆಗಳ ವಿಳಂಬಕ್ಕೂ ಕೋವಿಡ್ ಕಾರಣ ನೀಡಿದರೆ ಕ್ಷಮಿಸುವುದಿಲ್ಲ’ ಎಂದು ಹೇಳಿದೆ.
‘ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂಬ ಶಂಕೆಯಲ್ಲಿ ಗುಡಿಸಿಲುಗಳನ್ನು ನಾಶ ಮಾಡಲಾಗಿದೆ. ಪುನರ್ವಸತಿಗೆ ಸಂಬಂಧಿಸಿದಂತೆ ಯಾವುದೇ ಯೋಜನೆಯನ್ನು ಸರ್ಕಾರ ರೂಪಿಸಿಲ್ಲ. ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ನೀಡಬೇಕಿರುವ ಹಕ್ಕು ದೊರಕಿಸುವಲ್ಲಿ ಸಂಪೂರ್ಣ ಸರ್ಕಾರ ವಿಫಲವಾಗಿದೆ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.