ಬೆಂಗಳೂರು: ನ್ಯಾಯಾಲಯಕ್ಕೆ ಹಾಜರಾಗುವ ಸಾಕ್ಷಿದಾರರು ಮತ್ತು ಆರೋಪಿಗಳಿಗೆ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ(ಆರ್ಎಟಿ) ನಡೆಸಲು ಸಹಕಾರ ನೀಡುವಂತೆರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಕುರಿತ ಸ್ವಯಂ ಪ್ರೇರಿತ ಅರ್ಜಿ ವಿಚಾರಣೆ ನಡೆಸಿದಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಪರೀಕ್ಷೆ ನಡೆಸಲುನ್ಯಾಯಾಲಯಗಳ ಹೊರಗೆ ಸಂಚಾರಿ ಪರೀಕ್ಷಾ ಘಟಕಗಳನ್ನು ನಿಯೋಜಿಸುವ ಸಾಧ್ಯತೆ ಪರಿಶೀಲಿಸುವಂತೆ ತಿಳಿಸಿತು.
ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳ ಜತೆ ಸಭೆ ನಡೆಸುವಂತೆ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಮತ್ತು ತಾಲ್ಲೂಕು ನ್ಯಾಯಾಧೀಶರಿಗೆ ಪೀಠ ನಿರ್ದೇಶನ ನೀಡಿತು.
ಹೈಕೋರ್ಟ್ ಹೊರಡಿಸಿರುವ ಮಾರ್ಗದರ್ಶಿ ಸೂತ್ರಗಳ(ಎಸ್ಒಪಿ) ಪ್ರಕಾರ, 55 ತಾಲ್ಲೂಕು ನ್ಯಾಯಾಲಯಗಳಲ್ಲಿ ಸಾಕ್ಷಿದಾರರಿಗೆ ಇದೇ 28ರಿಂದ ಪ್ರವೇಶ ನೀಡಲಾಗುತ್ತಿದೆ. ಅಕ್ಟೋಬರ್ 5 ಮತ್ತು 12ರಿಂದ ಉಳಿದ ನ್ಯಾಯಾಲಯಗಳಲ್ಲಿ ಕಲಾಪ ಆರಂಭವಾಗಲಿವೆ.