ಬೆಂಗಳೂರು: ನಗರದಲ್ಲಿ ಸತತ ಸುರಿಯುತ್ತಿರುವ ಮಳೆಯಿಂದ ನಗರ್ತಪೇಟೆಯಲ್ಲಿ ಹಳೆಯ ಹೆಂಚಿನ ಮನೆಯೊಂದರ ಗೋಡೆ ಕುಸಿದು ಬಿದ್ದಿದ್ದು, ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ಧರ್ಮರಾಯಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಸುಮಾರು 90 ವರ್ಷ ಹಳೆಯಾದಾದ ಈ ಮನೆಯ ಒಂದು ಕಡೆಯ ಗೋಡೆ ಕುಸಿದಿದೆ. 6 ವರ್ಷದಿಂದ ಮನೆಯಲ್ಲಿ ಯಾರೂ ವಾಸ ಇರಲಿಲ್ಲ. ಹೀಗಾಗಿ, ಯಾವುದೇ ಹಾನಿಯಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅವಶೇಷ ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಉಳಿದಿರುವ ಗೊಡೆಗಳನ್ನೂ ನೆಲಸಮ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಕುಸಿಯುವ ಹಂತದಲ್ಲಿರುವ 185 ಮನೆಗಳ ಸರ್ವೆಯನ್ನುಎರಡು ವರ್ಷಗಳ ಹಿಂದೆಯೇ ಮಾಡಲಾಗಿದೆ. 10 ಕಟ್ಟ ನೆಲಸಮ ಮಾಡಲಾಗಿದ್ದು, ಉಳಿದವುಗಳನ್ನು ನೆಲಸಮ ಮಾಡಲು ಮತ್ತೆ ಸರ್ವೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.