ಬೆಂಗಳೂರು: ಅಲೆಮಾರಿ ಜನಾಂಗಕ್ಕೆ ಸಮುದಾಯ ವಸತಿ ಯೋಜನೆಯಡಿ 69 ಸಾವಿರ ಮನೆಗಳನ್ನು ಕಟ್ಟಿಕೊಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ರಾಮಮಂದಿರ ಭೂಮಿ ಪೂಜೆಯ ನೆನಪಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಆ ಪೈಕಿ ಅಲೆಮಾರಿಗಳಿಗೆ ಮನೆ ಕಟ್ಟಿಸಿಕೊಡುವುದೂ ಪ್ರಮುಖ ಯೋಜನೆ. ಮೊದಲ ಹಂತದಲ್ಲಿ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಯೋಜನೆ ಜಾರಿ ಮಾಡಲಾಗುವುದು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅರ್ಹ ಫಲಾನುಭವಿಗಳಿಗೆ ಮುಂದಿನ 20–25 ದಿನಗಳಲ್ಲಿ ಈ ಸಂಬಂಧ ಆದೇಶ ಪತ್ರ ನೀಡಲಾಗುವುದು. ಪ್ರತಿ ಫಲಾನುಭವಿಗಳಿಗೂ ತಲಾ ₹1.20 ಲಕ್ಷದಂತೆ 4 ಕಂತುಗಳಲ್ಲಿ ಮನೆ ನಿರ್ಮಾಣಕ್ಕೆ ಹಣ ನೀಡಲಾಗುವುದು. ಸರ್ಕಾರ ಹಣ ಕೊಡುತ್ತದೆ, ಫಲಾನುಭವಿಗಳು ತಮ್ಮ ಇಚ್ಛೆಯ ಪ್ರಕಾರ ಮನೆಗಳನ್ನು ಕಟ್ಟಿಕೊಳ್ಳಬೇಕು ಎಂದು ಸೋಮಣ್ಣ ಹೇಳಿದರು.
ರಾಮಮಂದಿರ ನಿರ್ಮಿಸಬೇಕು ಎಂಬುದು ಭಾರತೀಯರ ಐದು ಶತಮಾನಗಳ ಕನಸಾಗಿತ್ತು. ಅದು ಈಗ ಸಾಕಾರಗೊಳ್ಳುತ್ತಿದೆ. ಇದಕ್ಕಾಗಿ ಶ್ರಮಿಸಿದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಸಂಖ್ಯ ರಾಮಭಕ್ತರಿಗೆ ಗೌರವ ಸಮರ್ಪಿಸಬೇಕು ಎಂದು ಅವರು ತಿಳಿಸಿದರು.