ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕಿಚನ್‌ನಲ್ಲಿ ಹಸಿರು ಅಕ್ಕಿ–ಕೊಳೆತ ತರಕಾರಿ!

ಬೊಮ್ಮನಹಳ್ಳಿಯಲ್ಲಿ ಇಂದಿರಾ ಅಡುಗೆ ಮನೆ ಅವ್ಯವಸ್ಥೆ– ಕಳಪೆ ಆಹಾರ ಪೂರೈಕೆ
Last Updated 29 ಜೂನ್ 2019, 15:48 IST
ಅಕ್ಷರ ಗಾತ್ರ

ಬೆಂಗಳೂರು:ಬೊಮ್ಮನಹಳ್ಳಿಯ ದೇವರ ಚಿಕ್ಕನಹಳ್ಳಿ ವಾರ್ಡ್‌ ಸಂಖ್ಯೆ 175ರಲ್ಲಿರುವ ಇಂದಿರಾ ಕಿಚನ್‌ನಲ್ಲಿ ತಯಾರಿಸುತ್ತಿರುವ ಆಹಾರ ಕಳಪೆಯಾಗಿದ್ದು, ಪೌರ ಕಾರ್ಮಿಕರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ವಾರದ ಹಿಂದೆ ತರಲಾಗಿದ್ದ ತರಕಾರಿಗಳನ್ನು ಅಡುಗೆಗೆ ಬಳಸಲಾಗಿದೆ. ತೆಂಗಿನಕಾಯಿ, ತರಕಾರಿ ಕೊಳೆತು ಹೋಗಿವೆ. ಇವತ್ತು (ಶನಿವಾರ) ತಯಾರಿಸಲಾದ ಪೊಂಗಲ್‌ನಲ್ಲಿ ಸಾಕಷ್ಟು ಉಪ್ಪು ಸುರಿಯಲಾಗಿದೆ’ ಎಂದು ಪಾಲಿಕೆ ಸದಸ್ಯ ರಾಮ್‌ಮೋಹನ್‌ ರಾಜು ದೂರಿದರು.

‘ಬೊಮ್ಮನಹಳ್ಳಿಯಲ್ಲಿರುವ ಆರು ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರವು ಇದೇ ಕಿಚನ್‌ನಿಂದ ಹೋಗುತ್ತದೆ. ಪೌರಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಇದೇ ಆಹಾರ ಪೂರೈಸಲಾಗುತ್ತಿದೆ. ಕೈದಿಗಳಿಗೂ ಜೈಲಿನಲ್ಲಿ ಇಂತಹ ಆಹಾರ ನೀಡುವುದಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಆಂಧ್ರದಿಂದ ₹400ಕ್ಕೆ 25 ಕೆಜಿಯಂತೆ ಸೊಸೈಟಿ ಅಕ್ಕಿಯನ್ನು ತರಿಸಿದ್ದಾರೆ. ಅದು ಹಾಳಾಗಿದ್ದು, ಹಸಿರು ಬಣ್ಣಕ್ಕೆ ತಿರುಗಿದೆ. ಬೇಳೆ ಕೂಡ ಹಾಳಾಗಿದೆ. ನಿತ್ಯ 350ರಿಂದ 400 ಜನಕ್ಕೆ ಆಹಾರ ಪೂರೈಸುತ್ತಿದ್ದೇವೆ ಎಂದು ಗುತ್ತಿಗೆದಾರರು ಹೇಳುತ್ತಾರೆ. ಜನರ ಆರೋಗ್ಯದ ಗತಿ ಏನು’ ಎಂದು ಅವರು ಪ್ರಶ್ನಿಸುತ್ತಾರೆ.

‘ನಿತ್ಯವೂ ಕಳಪೆ ಆಹಾರವನ್ನೇ ನೀಡಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪೌರಕಾರ್ಮಿಕರು ಹೇಳಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದಪಾಲಿಕೆ ಜಂಟಿ ಆಯುಕ್ತ (ಆರೋಗ್ಯ) ಸರ್ಫರಾಜ್‌ ಖಾನ್‌, ‘ಶೆಫ್‌ಟಾಕ್‌ ಕಂಪನಿಗೆ ಈ ಕ್ಯಾಂಟೀನ್‌ ನಿರ್ವಹಣೆಯ ಗುತ್ತಿಗೆ ನೀಡಲಾಗಿತ್ತು. ಕೊಳೆತಿರುವ ಮತ್ತು ಕೆಟ್ಟಿರುವ ಆಹಾರ ಪದಾರ್ಥಗಳನ್ನು ಬಳಸಿರುವುದು, ಕಳಪೆ ಆಹಾರ ತಯಾರಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೆ, ಸ್ಥಳೀಯ ಆರೋಗ್ಯ ಅಧಿಕಾರಿಗಳು ಈ ಕುರಿತು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಆರೋಪ ಸಾಬೀತಾದರೆ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಮತ್ತು ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT