ಬೆಂಗಳೂರು: ವಿಧಾನಸೌಧ ಭದ್ರತೆ ಕರ್ತವ್ಯದಲ್ಲಿದ್ದ ವೇಳೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಇನ್ಸ್ಪೆಕ್ಟರ್ ಬಿ.ಧನಂಜಯ್ (37) ಅವರು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
2010ನೇ ಪಿಎಸ್ಐ ಬ್ಯಾಚ್ನ ಧನಂಜಯ್, ಹೆಣ್ಣೂರಿನಲ್ಲಿ ನೆಲೆಸಿದ್ದರು. ಇವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
‘ಹಲಸೂರು, ಬಾಣಸವಾಡಿ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಿದ್ದ ಅವರಿಗೆ ಇತ್ತೀಚೆಗೆ ಇನ್ಸ್ಪೆಕ್ಟರ್ ಆಗಿ ಬಡ್ತಿ ಸಿಕ್ಕಿತ್ತು. ವಿಧಾನಸೌಧ ಭದ್ರತೆ ಕೆಲಸಕ್ಕೆ ಅವರನ್ನು ನಿಯೋಜಿಸಲಾಗಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಮೂಳೆ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕಾಗಿ ರಜೆ ಪಡೆದಿದ್ದರು. 10 ದಿನದ ಹಿಂದೆಯಷ್ಟೇ ಪುನಃ ಕೆಲಸಕ್ಕೆ ಬರಲಾರಂಭಿಸಿದ್ದರು. ಶುಕ್ರವಾರ ಕೆಲಸದ ಸ್ಥಳದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಅಸುನೀಗಿದರು’ ಎಂದು ತಿಳಿಸಿದರು.