ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬೆವರ ಹನಿಗಳಿಗೆ ಬೆಲೆ ಸಿಗುತ್ತಿಲ್ಲ: ಜಿ.ಸಿ.ಬಯ್ಯಾರೆಡ್ಡಿ ಕಳವಳ

Last Updated 10 ಜೂನ್ 2021, 17:27 IST
ಅಕ್ಷರ ಗಾತ್ರ

ಬೆಂಗಳೂರು:‘ಕನಿಷ್ಠ ಬೆಂಬಲ ಬೆಲೆ ನಾಮಕಾವಸ್ಥೆಯಾಗಿದೆ. ದೇಶದ ಶೇ 53 ರಷ್ಟು ರೈತರ ಬೆವರ ಹನಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ರೈತರು ಇನ್ನಷ್ಟು ದೊಡ್ಡ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಹುದು’ ಎಂದು ಸಂಯುಕ್ತ ಹೋರಾಟ–ಕರ್ನಾಟಕದ ಸಂಯೋಜಕ ಜಿ.ಸಿ.ಬಯ್ಯಾರೆಡ್ಡಿ ಕಳವಳ ವ್ಯಕ್ತಪಡಿಸಿದರು.

ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ದಲಿತ ಹಕ್ಕುಗಳ ಸಮಿತಿ–ಕರ್ನಾಟಕ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಕೊರೊನಾ ಕಂಬನಿಯ ಕುಯಿಲು’ ವೆಬಿನಾರ್‌ ಸರಣಿಯಲ್ಲಿ ಗುರುವಾರ ‘ಕೊರೊನಾ: ರೈತರ ಸಮಸ್ಯೆ’ ಕುರಿತು ಮಾತನಾಡಿದರು.

‘ದೇಶದ ಶೇ 52ರಷ್ಟು ಜನರನ್ನು ಕೃಷಿಯಿಂದ ಹೊರಗಿಡುವ ಹುನ್ನಾರ ನಡೆಯುತ್ತಿದೆ. ಇದು ಸಾಕಾರಗೊಂಡರೆ ಜನ ಹಸಿವಿನಿಂದ ಸಾಯಲಿದ್ದಾರೆ. ಈಗಿನ ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಸಂಸತ್‌ ನಿಯಮಗಳನ್ನು ಗಾಳಿಗೆ ತೂರಿ ರೈತರ ಬದುಕಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಅನುಷ್ಠಾನಗೊಳಿಸಿದೆ.ದೇಶದಲ್ಲಿ ಶೇ 85ಕ್ಕಿಂತ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಇವರನ್ನು ಗಮನದಲ್ಲಿಟ್ಟುಕೊಂಡು ಕೃಷಿ ನೀತಿ ಸಿದ್ಧಪಡಿಸಬೇಕು. ಹಾಗಾದಾಗಅವರ ಬದುಕು ಹಸನಾಗಬಹುದು’ ಎಂದರು.

ಕೃಷಿ ತಜ್ಞ ಪ್ರಕಾಶ್‌ ಕಮ್ಮರಡಿ ‘ಕೃಷಿ ವಲಯವನ್ನು ಕಾರ್ಪೊರೇಟ್‌ಗಳ ಕೈವಶ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ಅದರಿಂದ ತನಗೆ ಹಿನ್ನಡೆಯುಂಟಾಗುತ್ತಿದೆ ಎಂಬುದರ ಅರಿವಿದ್ದರೂ ಹಿಂಪಡೆಯಲು ಹಿಂದೇಟು ಹಾಕುತ್ತಿದೆ. ಈಗ ಎಲ್ಲರಲ್ಲೂ ರೈತ ಪ್ರಜ್ಞೆ ಜಾಗೃತಗೊಂಡಿದೆ. ಹೀಗಾಗಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ’ ಎಂದು ತಿಳಿಸಿದರು.

ಚಿಂತಕ ಪುರುಷೋತ್ತಮ ಬಿಳಿಮಲೆ ‘ರೈತ ಚಳವಳಿಗಳನ್ನು ಒಡೆಯಲು ಕೋಮುವಾದದ ಅಸ್ತ್ರ ಪ್ರಯೋಗಿಸಲಾಯಿತು. ಅದು ಸಂಪೂರ್ಣವಾಗಿ ವಿಫಲವಾಯಿತು. ಕೊರೊನಾ ಎರಡನೇ ಅಲೆ ರೈತರನ್ನು ಗಾಢವಾಗಿ ಬಾಧಿಸಿದೆ. ಮೂರನೇ ಅಲೆ ಬಂದರೆ ಶೇ25ರಷ್ಟು ಗ್ರಾಮೀಣ ಭಾಗದ ರೈತರು ನಾಶವಾಗುತ್ತಾರೆ. ಈಗಿನ ಮೂರು ಕಾಯ್ದೆಗಳು ಅಧಿಕಾರದಲ್ಲಿರುವವರಿಗೆ ಲಾಭ ತಂದುಕೊಡಬಹುದಷ್ಟೆ. ರೈತ ಚಳವಳಿ ರೈತರಲ್ಲಿ ಸ್ವಾಭಿಮಾನ ಬೆಳೆಸಿದೆ. ಕೊರೊನಾದಿಂದಾಗಿ ಜನ ಸಾಯುತ್ತಿರುವಾಗ ಕೇಂದ್ರ ಸರ್ಕಾರ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿಕೊಂಡಿದೆ’ ಎಂದು ದೂರಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT