ಬೆಂಗಳೂರು: ಜೆ.ಪಿ ಪಾರ್ಕ್ನ ಮುತ್ಯಾಲನಗರ ಮೇಲ್ಸೇತುವೆ ಕೆಳಬಾಗದಲ್ಲಿ ₹ 1.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶಿರಡಿ ಸಾಯಿಬಾಬಾ ಜ್ಞಾನಮಂದಿರದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಅದ್ದೂರಿಯಾಗಿ ನಡೆಯಿತು. ಶಾಸಕ ಮುನಿರತ್ನ ಉದ್ಘಾಟನೆ ನೆರವೇರಿಸಿದರು.
‘ದೇಶದ ಸಂತರು, ಶರಣರು ಹಾಗೂ ದಾರ್ಶನಿಕರು ನೀಡಿಹೋದ ತತ್ವ, ಸಿದ್ಧಾಂತ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣದ ಕಡೆಗೆ ನಮ್ಮ ಆಲೋಚನೆಗಳು ಸಾಗಬೇಕಾಗಿದೆ’ ಎಂದರು.
ಸಮಿತಿಯ ಸದಸ್ಯೆ ಕೆ.ಸುನಂದಾ ಬೋರೇಗೌಡ ಮಾತನಾಡಿ, ‘ಹಲವಾರು ವರ್ಷಗಳಿಂದ ಈ ಭಾಗದ ಜನರು ಸಾಯಿಬಾಬಾ ದರ್ಶನಕ್ಕಾಗಿ ಮಲ್ಲೇಶ್ವರ ಹಾಗೂ ಆರ್.ಟಿ.ನಗರಕ್ಕೆ ತೆರಳಬೇಕಾಗಿತ್ತು. ಇದನ್ನರಿತ ಶಾಸಕರು ಸಾಯಿಬಾಬಾ ಜ್ಞಾನಮಂದಿರ ನಿರ್ಮಾಣ ಮಾಡುವ ಮೂಲಕ ಈ ಭಾಗದ ನಾಗರಿಕರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಲು ಅನುಕೂಲ ಕಲ್ಪಿಸಿದ್ದಾರೆ’ ಎಂದರು.