ಬೆಂಗಳೂರು: ‘ಮಹಾಲಕ್ಷ್ಮೀ ಬಡಾವಣೆ ವಿಧಾನಸಭಾ ಕ್ಷೇತ್ರದ ಆಟೊ ಚಾಲಕರ ಸಂಘಕ್ಕೆ ಪ್ರತಿ ವರ್ಷ ₹1 ಲಕ್ಷ ಸಹಾಯಧನ ನೀಡಲಾಗುವುದು’ ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ಭರವಸೆ ನೀಡಿದರು.
ಮಹಾಲಕ್ಷ್ಮೀ ಎಜುಕೇಷನ್ ಟ್ರಸ್ಟ್ ಹಾಗೂ ಮಹಾಲಕ್ಷ್ಮೀ ಬಡಾವಣೆ ಬಿಜೆಪಿ ಮಂಡಲದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನ–ಸುಶಾಸನ ಆಡಳಿತ ದಿನ’ದ ಅಂಗವಾಗಿ ಕ್ಷೇತ್ರದ 1,500 ಆಟೊ ಚಾಲಕರಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಲ್ಲ ಚಾಲಕರು ಪ್ರತಿ ವಾರ ₹100 ಸೇರಿಸಿದರೆ, ತಿಂಗಳಿಗೆ ಹಾಗೂ ವರ್ಷಕ್ಕೆ ಅದು ದೊಡ್ಡ ಮೊತ್ತವಾಗಿ ಪರಿವರ್ತನೆಯಾಗುತ್ತದೆ. ಇದು ನಿಮ್ಮ ಸಂಕಷ್ಟಗಳಿಗೆ ನೆರವಾಗಲಿದೆ. ಬೇರೊಬ್ಬರ ಬಳಿ ಕೈಚಾಚದೆ, ಸ್ವತಂತ್ರ ಜೀವನ ನಡೆಸಲೂ ಸಾಧ್ಯವಾಗುತ್ತದೆ’ ಎಂದು ಕಿವಿಮಾತು ಹೇಳಿದರು.
‘ಕ್ಷೇತ್ರದಲ್ಲಿನ ಆಟೊ ಚಾಲಕರಿಗೆ ಕೊಟ್ಟ ಮಾತಿನಂತೆ ಎರಡು ಜೊತೆ ಸಮವಸ್ತ್ರ ವಿತರಿಸಲಾಗಿದೆ.ಆಟೊದಲ್ಲಿ ಬರುವ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಾ ಇಡೀ ರಾಜ್ಯದಲ್ಲಿ ಮಹಾಲಕ್ಷ್ಮೀ ಬಡಾವಣೆ ಕ್ಷೇತ್ರದ ಚಾಲಕರು ಬೇರೆಯವರಿಗೆ ಆದರ್ಶ ಹಾಗೂ ಮಾದರಿಯಾಗಿ ಕಾಣಬೇಕು’ ಎಂದರು.
ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್,‘ಆಟೊ ಚಾಲಕರು ಕುಡಿತಕ್ಕೆ ಒಳಗಾಗಬೇಡಿ. ಇದರಿಂದ ನಿಮ್ಮ ಕುಟುಂಬಗಳು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ‘ ಎಂದರು.