‘ಸೈಬರ್ ವಂಚನೆ ತಡೆಗೆ ಕಂಟ್ರೋಲ್ ರೂಂ’

ಬೆಂಗಳೂರು: ‘ಸೈಬರ್ ಅಪರಾಧಗಳನ್ನು ಮಟ್ಟ ಹಾಕುವ ಸಲುವಾಗಿ ‘ಸೈಬರ್ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಂ)’ ಶೀಘ್ರವೇ ಕಾರ್ಯಾರಂಭ ಮಾಡಲಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.
ಎಚ್ಎಸ್ಆರ್ ಬಡಾವಣೆ ಠಾಣೆಯ ಆವರಣದಲ್ಲಿ ನವೀಕೃತ ಸಿಇಎನ್ ಪೊಲೀಸ್ ಠಾಣೆಯನ್ನು ಗುರುವಾರ ಉದ್ಘಾಟಿಸಿ, ಅವರು ಮಾತನಾಡಿದರು.
‘ಸಾರ್ವಜನಿಕ ದೂರುಗಳಿಗೆ ತುರ್ತು ಸಂಖ್ಯೆ-100 ಕಾರ್ಯನಿರ್ವಹಿಸುತ್ತಿದೆ. ಇದೇ ಸಂಖ್ಯೆಯನ್ನು ಸೈಬರ್ ಕೃತ್ಯಗಳ ಸಂಬಂಧ ದೂರು ನೀಡಲು ಬಳಕೆ ಮಾಡಲಾಗುವುದು. 100ಕ್ಕೆ ಕರೆ ಮಾಡಿದರೆ ಒಂದು ಮತ್ತು ಎರಡು ಎಂಬ ಆಯ್ಕೆಗಳು ಬರಲಿವೆ. ಸಾರ್ವಜನಿಕರು ಸುಲಭವಾಗಿ ದೂರು ನೀಡಬಹುದು’ಎಂದು ಮಾಹಿತಿ ನೀಡಿದರು.
‘ಕಂಟ್ರೋಲ್ ರೂಂನಲ್ಲೇ ಸೈಬರ್ ವಂಚನೆ ದೂರು ಸ್ವೀಕರಿಸುವ ಪ್ರತ್ಯೇಕ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಬರುವ ದೂರು ಆಧರಿಸಿ ಸಿಬ್ಬಂದಿ, ಬ್ಯಾಂಕ್ಗಳಿಗೆ ಇಮೇಲ್ ಕಳುಹಿಸಿ ವಿವರ ಸಲ್ಲಿಸಲಿದ್ದಾರೆ. ಇದು ಐದಾರು ನಿಮಿಷಗಳ ಪ್ರಕ್ರಿಯೆ. ಈ ಮೂಲಕ ವಂಚಕರ ಖಾತೆಗೆ ಬಿದ್ದ ಹಣ ತಡೆ ಹಿಡಿಯಬಹುದು. ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಸಮ್ಮತಿ ನೀಡಿದೆ’ ಎಂದರು.
‘ಸಾರ್ವಜನಿಕರು ಹಣ ಕಳೆದುಕೊಂಡ ಮೊದಲ ಒಂದು ಗಂಟೆ 'ಗೋಲ್ಡನ್ ಅವರ್’ ಆಗಿರುತ್ತದೆ. ಆರೋಪಿ ಖಾತೆಗೆ ಬಿದ್ದ ಹಣ ತಡೆಯಲು ಈ ಅವಧಿ ಮಹತ್ವದ್ದು. ಇದಕ್ಕಾಗಿ ಸಾಫ್ಟ್ವೇರ್ ಹಾಗೂ ಆ್ಯಪ್ ರೂಪಿಸಲಾಗಿದೆ’ ಎಂದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.