ರಾಜರಾಜೇಶ್ವರಿನಗರ: ‘ಕಸುಬಿಗೆ ತಕ್ಕಂತೆ ಪೇಟೆ, ಪಂಥಗಳಿಗೆ ತಕ್ಕಂತೆ ಗುಡಿಗೋಪುರ, ವಸತಿಗೆ ತಕ್ಕಂತೆ ಕೆರೆ–ಕುಂಟೆಗಳನ್ನು ನಿರ್ಮಿಸಿ ಮಾದರಿ ನಗರ ನಿರ್ಮಾಣಕ್ಕೆ ಕಾರಣರಾದ ನಾಡಪ್ರಭು ಕೆಂಪೇಗೌಡರಜಾತ್ಯತೀತ ಮನೋಭಾವ ಎಲ್ಲರೂ ಸ್ಮರಿಸು ವಂತದ್ದು’ ಎಂದು ಬೆಂಗಳೂರು ದಕ್ಷಿಣ ತಾಲ್ಲೂಕು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಪುಟ್ಟೇಗೌಡ ಹೇಳಿದರು.
ಬೆಂಗಳೂರು ದಕ್ಷಿಣ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ದೊಡ್ಡಕಲ್ಲಸಂದ್ರ ಬಳಿಯ ನಾರಾಯಣನಗರದಲ್ಲಿ ಏರ್ಪಡಿಸಿದ್ದ 509ನೇ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೆಂಪೇಗೌಡರು ದೂರದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿದರು. ಎಲ್ಲಾ ಸಮುದಾಯದವರು ಸಹಬಾಳ್ವೆಯಿಂದ ಜೀವನ ನಡೆಸುವಂತೆ ಮಾಡಿದ್ದಾರೆ’ ಎಂದರು.
ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಡಿ.ಹನುಮಂತಯ್ಯ ಮಾತನಾಡಿ, ‘ಧಾರ್ಮಿಕ, ಸಾಂಸ್ಕೃತಿಕ, ಜಾನಪದ ಕಲೆಗಳ ಬೆಳೆವಣಿಗೆ ಜೊತೆಗೆ ಎಲ್ಲಾ ಸಮುದಾಯದವರಿಗೆ ಅಧಿಕಾರ,ಶಿಕ್ಷಣ, ಸವಲತ್ತನ್ನು ನಾಡಪ್ರಭು ಕೆಂಪೇಗೌಡರು ನೀಡಿದ್ದರು’ ಎಂದು ಹೇಳಿದರು.