ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಯಲ್ಲಿ ಅಂತ್ಯಕ್ರಿಯೆಗಾಗಿ ಶವವನ್ನು ಸೈಕಲ್ನಲ್ಲಿ ಸಾಗಿಸಿದ್ದು, ತೀರಾ ಗಂಭೀರ ಪ್ರಕರಣ. ಕೊರೊನಾ ವೈರಸ್ ಶಂಕೆಯಿಂದ ಅಂತಿಮ ಯಾತ್ರೆಗೆ ಯಾರೂ ಬರಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಸಹೋದರರು ತಮ್ಮ ತಂದೆಯ ಶವವನ್ನು ಸೈಕಲ್ ಮೇಲೆ ಸಾಗಿಸಿದರು. ಇದು ಅಮಾನವೀಯ ಘಟನೆ. ಇಂತಹ ಸಂದರ್ಭದಲ್ಲಿ ಸರ್ಕಾರ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕಿತ್ತು. ಅಂತಿಮ ಯಾತ್ರೆಗೆ ಈ ರೀತಿ ದುರವಸ್ಥೆ ಆಗಬಾರದು ಎಂದು ಮಾನವ ಹಕ್ಕುಗಳ ಆಯೋಗ ಈ ಹಿಂದೆಯೇ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರೂ, ಆದೇಶವನ್ನು ನಿರ್ಲಕ್ಷಿಸಲಾಗಿದೆ ಎಂದು ಪಾಟೀಲ ಹೇಳಿದ್ದಾರೆ.