ಬೆಂಗಳೂರು: ‘ಸಮಾಜದ ವ್ಯವಸ್ಥೆ ಕಲುಷಿತಗೊಂಡಿದೆ. ಇದಕ್ಕೆ ಯಾವುದೇ ಸಂಘ, ಪಕ್ಷ ಕಾರಣವಲ್ಲ. ಇಡೀ ಸಮಾಜದ ವ್ಯವಸ್ಥೆ ಕಾರಣ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟ, ಐಎನ್ಟಿಯುಸಿ ಬೆಂಗಳೂರು ನಗರ ನಗರದಲ್ಲಿ ಆಯೋಜಿಸಿದ್ದ ಕಾರ್ಮಿಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದರು.
‘ಬೇರೊಬ್ಬರು ಬದಲಾಗಬೇಕು ಎನ್ನುತ್ತೇವೆಯೇ ಹೊರತು, ನಾವು ಬದಲಾಗುವುದಿಲ್ಲ. ಮೊದಲು ನಾವು ಬದಲಾದಾಗ ಮಾತ್ರ ಸಮಾಜ ಬದಲಾಗಲು ಸಾಧ್ಯ’ ಎಂದರು.
ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ‘ಸಮಾಜ ಬದಲಾಗಿದೆ. ಭ್ರಷ್ಟರನ್ನು ಕರೆದು ಹಾರ ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಲಾ– ಕಾಲೇಜುಗಳಲ್ಲಿ ಮಕ್ಕಳಿಗೆ ಮೌಲ್ಯ, ನೈತಿಕತೆಯ ಪಾಠ ಮಾಡುವ ಅಗತ್ಯವಿದೆ’ ಎಂದರು.