ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಸಾವಿರ ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಶ್ರೀರಂಗಪಟ್ಟಣ ದೇವಸ್ಥಾನಕ್ಕೆ ಸೇರಿದ 565 ಎಕರೆ ಪರಭಾರೆ ಪ್ರಕರಣ * ಭೂಕಬಳಿಕೆ ತಡೆ ವಿಶೇಷ ನ್ಯಾಯಾಲಯ ಆದೇಶ
Last Updated 28 ಜನವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯಕ್ಕೆ ಸೇರಿದ 565 ಎಕರೆ ಪರಭಾರೆ ‍ಪ್ರಕರಣದಲ್ಲಿ ಒತ್ತುವರಿದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ 4 ಗ್ರಾಮಗಳಲ್ಲಿ ಈ ಜಮೀನು ಹರಡಿಕೊಂಡಿದ್ದು, ಇಲ್ಲಿ ಹಲವು ಬಡಾವಣೆಗಳು ಹಾಗೂ ನೂರಾರು ಮನೆಗಳು ನಿರ್ಮಾಣವಾಗಿವೆ. ಸುಮಾರು 2 ಸಾವಿರ ಒತ್ತುವರಿದಾರರು ಇದ್ದಾರೆ ಎಂದು ನ್ಯಾಯಾಲಯ ಅಂದಾಜಿಸಿದೆ. ಈ ಜಮೀನಿನ ಮಾರುಕಟ್ಟೆ ಮೌಲ್ಯ ₹3 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಭೂ ಕಬಳಿಕೆ ಮಾಡಿದವರ ವಿರುದ್ಧ ನಮೂನೆ–1ರಲ್ಲಿ ಎರಡು ತಿಂಗಳಲ್ಲಿ ಪ್ರಕರಣ ದಾಖಲಿಸಬೇಕು ಎಂದು ನ್ಯಾಯಮೂರ್ತಿ ಎಚ್‌.ಎನ್‌.ನಾರಾಯಣ, ನ್ಯಾಯಾಂಗ ಸದಸ್ಯ ಬಿ.ಬಾಲಕೃಷ್ಣ ಹಾಗೂ ಕಂದಾಯ ಸದಸ್ಯ ಬಿ.ಆರ್‌.ಜಯರಾಮರಾಜೇ ಅರಸ್‌ ಅವರನ್ನು ಒಳಗೊಂಡ ಪೀಠ ಈ ಆದೇಶ ಹೊರಡಿಸಿದೆ.

ಐದು ಗ್ರಾಮಗಳ 880 ಎಕರೆ 37 ಗುಂಟೆ ಜಮೀನು ಪರಭಾರೆ ಬಗ್ಗೆ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿತ್ತು. ಈ ನಡುವೆ, ಇಲ್ಲಿನ 279 ಎಕರೆಯನ್ನು 52 ಮಂದಿ ಕಬಳಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹೇಮಂತರಾಜು ಅವರು ನ್ಯಾಯಾಲಯದಲ್ಲಿ 2016ರ ನವೆಂಬರ್‌ 2ರಂದು ದೂರು ದಾಖಲಿಸಿದ್ದರು. ಜಾಗವನ್ನು ಮರು ಸರ್ವೆ ಮಾಡಿ ವರದಿ ಸಲ್ಲಿಸುವಂತೆ ಬೆಂಗಳೂರು ದಕ್ಷಿಣ ತಹಶೀಲ್ದಾರ್‌ ಅವರಿಗೆ ಕೋರ್ಟ್‌ ನಿರ್ದೇಶನ ನೀಡಿತ್ತು.

ಬೆಂಗಳೂರು ದಕ್ಷಿಣ ಭೂನ್ಯಾಯಮಂಡಳಿ 1982 ಹಾಗೂ 1993ರಲ್ಲಿ ಕಾನೂನುಬಾಹಿರವಾಗಿ ಹಂಚಿಕೆ ಮಾಡಿತ್ತು ಎಂದು ಬೆಂಗಳೂರು ನಗರ ಜಿಲ್ಲಾಡಳಿತದ ಅಧಿಕಾರಿಗಳು ವರದಿ ನೀಡಿದ್ದರು. ಭೂನ್ಯಾಯಮಂಡಳಿಯ ಸದಸ್ಯರ ಲೋಪದಿಂದಲೇ ಈ ಜಾಗ ಪರಭಾರೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ನ್ಯಾಯಮಂಡಳಿಯಿಂದ ಜಾಗ ಮಂಜೂರು ಮಾಡಿಸಿಕೊಂಡಿರುವ ಎಲ್ಲ ಫಲಾನುಭವಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಸೂಚನೆ ನೀಡಿದೆ. ಭೂಮಾಪನಾ ಇಲಾಖೆಯ ಸರ್ವೆ ವರದಿ, ಕಂದಾಯ ಇಲಾಖೆಯಿಂದ ವಿಚಾರಣಾ ವರದಿ ತರಿಸಿಕೊಂಡು ಈ ಕ್ರಮ ಕೈಗೊಂಡಿದೆ.

ಚೋಳನಾಯನಹಳ್ಳಿಯ 33 ಎಕರೆ ಖಾಲಿ ಜಾಗವನ್ನು ಮುಜರಾಯಿ ಇಲಾಖೆಗೆ ಕಂದಾಯ ಇಲಾಖೆ ಹಸ್ತಾಂತರ ಮಾಡಬೇಕು ಎಂದೂ ಕೋರ್ಟ್‌ ನಿರ್ದೇಶನ ನೀಡಿದೆ.

ಬೆಂಗಳೂರಿನ ಮಲ್ಲೇಶ್ವರದ ನಿವಾಸಿ ದ್ವಾರಕಾಬಾಯಿ ವೇದಾಂತಂ ಎಂಬುವರು ಶ್ರೀರಂಗಪಟ್ಟಣದ ದೇವಸ್ಥಾನದ ಧರ್ಮಾರ್ಥ ಕಾರ್ಯಗಳಿಗಾಗಿ 1939ರಲ್ಲಿ ಐದು ಗ್ರಾಮಗಳಲ್ಲಿನ ಭೂಮಿಯನ್ನು ಟ್ರಸ್ಟ್‌ ಡೀಡ್‌ ಮೂಲಕ ದಾನವಾಗಿ ನೀಡಿದ್ದರು. ಮಾಗಡಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ (ನೋಂದಣಿ ಸಂಖ್ಯೆ 1957/38–39) 1939 ಏಪ್ರಿಲ್‌ 15ರಂದು ದಾನಪತ್ರದ ಮೂಲಕ ನೋಂದಣಿ ಮಾಡಿಸಲಾಗಿತ್ತು. ‘ಈ ಆಸ್ತಿಯ ಆದಾಯದ 1/3 ಭಾಗವನ್ನು ದೇವಸ್ಥಾನದ ಭಕ್ತಾದಿಗಳ ಅನ್ನ ಸಂತರ್ಪಣೆಗೆ ವಿನಿಯೋಗಿಸಬೇಕು. ಉಳಿದ ಹಣವನ್ನು ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರಿಗೆ, ಆರೋಗ್ಯ ಮಾಹಿತಿ ಪ್ರಸಾರ ಮಾಡಲು ಹಾಗೂ ಶುಚಿತ್ವದ ಅಭ್ಯಾಸ ಬೆಳೆಸಲು ಶಿಷ್ಯವೇತನ ನೀಡಲು ಬಳಸಬೇಕು’ ಎಂದು ದಾನಪತ್ರದಲ್ಲಿ ತಿಳಿಸಿದ್ದರು.

ದೇವಾಲಯಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂಮಿ ದಾನ ಮಾಡಿರುವ ಬಗ್ಗೆ ಮುಜರಾಯಿ ಇಲಾಖೆಗೂ ಮಾಹಿತಿ ಇರಲಿಲ್ಲ. 2015ರಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರು ದೇವಸ್ಥಾನದ ಭೂಮಿಯ ಬಗ್ಗೆ ಮಾಹಿತಿ ನೀಡಿದಾಗಲೇ ಅವರಿಗೂ ಗೊತ್ತಾಗಿತ್ತು.

ಈ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲು ಜರೂರು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿ ಮಂಡ್ಯ ಜಿಲ್ಲಾಧಿಕಾರಿ ಅವರು ನಗರ ಜಿಲ್ಲಾಡಳಿತಕ್ಕೆ 2016ರ ಜೂನ್‌ 4ರಂದು ಪತ್ರ ಬರೆದಿದ್ದರು. ‘ಈ ಜಮೀನುಗಳನ್ನು ಇನಾಂ ರದ್ದತಿ ಕಾಯ್ದೆ ಅಥವಾ ಭೂ ಸುಧಾರಣೆ ಕಾಯ್ದೆ ಅನ್ವಯ ಅದಿಭೋಗದಾರಿಕೆ ಹಕ್ಕು ನೀಡಲು ಅವಕಾಶವಿಲ್ಲದಿದ್ದರೂ ನಿಯಮ ಉಲ್ಲಂಘಿಸಿ ಪರಭಾರೆ ಮಾಡಲಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ನಗರ ಜಿಲ್ಲಾಡಳಿತದ ಅಧಿಕಾರಿಗಳು ಪ್ರಕರಣದ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿರಲಿಲ್ಲ. ಬಳಿಕ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡಿತ್ತು.

ಐತಿಹಾಸಿಕ ಆದೇಶ
‘ಇದೊಂದು ಐತಿಹಾಸಿಕ ಆದೇಶ. ನ್ಯಾಯಾಲಯದ ಆದೇಶವನ್ನು ಪಾಲಿಸುತ್ತೇವೆ. ಆದೇಶದ ‍ಪ್ರತಿಯನ್ನು ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಅವರಿಗೆ ಕಳುಹಿಸಲಾಗಿದೆ. ಈಗಾಗಲೇ ನ್ಯಾಯಾಲಯದ ಆದೇಶದಂತೆ ಚೋಳನಾಯಕನಹಳ್ಳಿಯ 56 ಎಕರೆ ಜಮೀನನ್ನು ದೇವಸ್ಥಾನದ ಸ್ವಾಧೀನಕ್ಕೆ ಪಡೆಯಲಾಗಿದೆ. ಈಗ ಮತ್ತೆ 33 ಎಕರೆಯನ್ನು ಹಸ್ತಾಂತರಿಸಲಾಗುತ್ತದೆ’ ಎಂದು ನ್ಯಾಯಾಲಯದ ವಿಶೇಷ ಸರ್ಕಾರಿ ವಕೀಲ ಬಿ.ಎಸ್‌.ಪಾಟೀಲ ತಿಳಿಸಿದರು.

ಯಾವ ಜಾಗ...
* ಚೋಳನಾಯಕನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 57ರಲ್ಲಿ 33 ಎಕರೆ, 58ರಲ್ಲಿ 23 ಎಕರೆ, 59ರಲ್ಲಿ 6 ಎಕರೆ, 61ರಲ್ಲಿ 26 ಎಕರೆ, 62ರಲ್ಲಿ 31 ಎಕರೆ, 63ರಲ್ಲಿ 29 ಎಕರೆ

* ಕುರುಬರಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 112ರಿಂದ 114ರಲ್ಲಿ 190 ಎಕರೆ

* ದೊಡ್ಡಮಾರನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 28ರಿಂದ 30 ಹಾಗೂ ಸರ್ವೆ ಸಂಖ್ಯೆ 32ರಲ್ಲಿ 88 ಎಕರೆ 36 ಗುಂಟೆ

* ಬ್ಯಾಲಾಳು ಗ್ರಾಮದ ಸರ್ವೆ ಸಂಖ್ಯೆ 47ರಿಂದ 53ರ ವರೆಗೆ 195 ಎಕರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT