ಬೆಂಗಳೂರು: ‘ಪಕ್ಷದ ಮಹಾರಾಷ್ಟ್ರ ಉಸ್ತುವಾರಿಯಿಂದ ನನ್ನನ್ನು ಕೈಬಿಟ್ಟಿದ್ದಕ್ಕೆ ಬೇಸರವಿಲ್ಲ. ಎಲ್ಲವೂ ನಮ್ಮ ಕೈಯಲ್ಲಿ ಇರುವುದಿಲ್ಲ. ಎಲ್ಲವೂ ನನಗೆ ಸಿಗಬೇಕೆಂಬ ಆಸೆಯೂ ನನಗಿಲ್ಲ. ನಾನು ಒಂದು ತತ್ವಾದರ್ಶ ಹೊಂದಿದವನು’ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನಾನು ನೆಹರು, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವವನು’ ಎಂದರು.
‘ಪಕ್ಷದ ಸಿದ್ಧಾಂತ ಅನುಷ್ಠಾನಕ್ಕೆ ತರಲು ಯಾರೇ ಇರಲಿ. ಅದಕ್ಕೆ ನನ್ನ ಒಪ್ಪಿಗೆ ಇದೆ. ನನಗೆ ಹುದ್ದೆ ಸಿಗಲಿಲ್ಲ ಎಂದು ವ್ಯಥೆ ಪಟ್ಟವನೂ ಅಲ್ಲ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರೂ ಇರಬೇಕು. ಆ ದಿಕ್ಕಿನಲ್ಲೇ ನಾನು ಮುನ್ನಡೆದಿರುವವನು’ ಎಂದರು.
‘ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ನಾನು ಬೇಡಿಕೆ ಇಟ್ಟಿಲ್ಲ. ಆ ಸ್ಥಾನದಲ್ಲಿ ಈಗ ಗುಲಾಂ ನಬಿ ಇದ್ದಾರೆ. ಅದರ ಬಗ್ಗೆ ಹೈಕಮಾಂಡ್ ನಿಲುವು ತೆಗೆದುಕೊಳ್ಳಲಿದೆ. ಹೈಕಮಾಂಡ್ ನಿಲುವಿಗೆ ನಾನು ತಲೆ ಬಾಗುತ್ತೇನೆ’ ಎಂದೂ ಹೇಳಿದರು.