ಕೆ.ಆರ್.ಪುರ: ಇವರ ಮನೆಯಲ್ಲಿ ಬಡತನವಿದೆ. ಆದರೆ, ಹೃದಯ ಶ್ರೀಮಂತಿಕೆಗೆ ಕೊರತೆ ಇಲ್ಲ. ಇದರ ಜೊತೆಗೆ, ದೇಶಕ್ಕೆ ಕಿಂಚಿತ್ತಾದರೂ ಕೊಡುಗೆ ನೀಡಬೇಕು ಎಂಬ ಸದುದ್ದೇಶದಿಂದ ಪಿಎಂ–ಕೇರ್ಸ್ಗೆ ₹60 ಸಾವಿರ ದೇಣಿಗೆ ನೀಡಿದ್ದಾರೆ ಆಂಥೋನಿ ಸ್ವಾಮಿ.
ಇವರು ಕಲ್ಪಳ್ಳಿಯ ವಿದ್ಯುತ್ ಚಿತಾಗಾರದಲ್ಲಿ ಶವ ಸುಡುವ ಕೆಲಸ ಮಾಡುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟ ಹಣವನ್ನು ಕೊರೊನಾ ಪರಿಹಾರ ಕಾರ್ಯಗಳಿಗೆ ನೀಡಿದ್ದಾರೆ ಆಂಥೋನಿ ಸ್ವಾಮಿ ಅಲಿಯಾಸ್ ಎಲ್.ಎಸ್. ಕುಟ್ಟಿ.
32 ವರ್ಷಗಳಿಂದ ಕಲ್ಪಳ್ಳಿಯ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ತಿಂಗಳಿಗೆ ₹10 ಸಾವಿರ ಗೌರವಧನ ನೀಡುತ್ತದೆ. ಇದರಲ್ಲಿಯೇ ನಾಲ್ಕು ಮಕ್ಕಳು, ಪತ್ನಿ ಮತ್ತು ತಾಯಿಯನ್ನು ಅವರು ಸಾಕಬೇಕು. ಸರ್ಕಾರವೇ ನೀಡಿರುವ ಸ್ಮಶಾನದ ಮೂಲೆಯೊಂದರ ಪುಟ್ಟ ಮನೆಯಲ್ಲಿ ಅವರು ವಾಸವಿದ್ದಾರೆ. ಅವರ ತಂದೆಯೂ ಇಲ್ಲಿಯೇ ಕೆಲಸ ಮಾಡುತ್ತಿದ್ದರು.
ಅವರ ಒಬ್ಬ ಮಗಳು ಒಂಬತ್ತನೇ ತರಗತಿ, ಮಗ ಎಸ್ಎಸ್ಎಲ್ಸಿ ಓದುತ್ತಿದ್ದಾನೆ. ಮತ್ತಿಬ್ಬರು ಹೆಣ್ಣು ಮಕ್ಕಳು ಪಿಯುಸಿ ಓದುತ್ತಿದ್ದು, ಅವರ ಮುಂದಿನ ಶಿಕ್ಷಣಕ್ಕಾಗಿ ಅರವತ್ತು ಸಾವಿರ ಹಣವನ್ನು ಇವರು ಕೂಡಿಟ್ಟಿದ್ದರು.
ನೆರೆ ಹಾವಳಿ ಸಂದರ್ಭದಲ್ಲಿಯೂ ಸಂತ್ರಸ್ತರಿಗಾಗಿ ₹8 ರೂಪಾಯಿಯಲ್ಲಿ ಔಷಧಿ ಖರೀದಿಸಿ ಅಗತ್ಯವಿರುವವರಿಗೆ ನೀಡಿದ್ದರು. ಅನೇಕ ಸಲ ಇವರು ಕುಟುಂಬದವರ ನೆರವಿನೊಂದಿಗೆ ಅನಾಥ ಶವಗಳಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
‘ನನ್ನ ಮಕ್ಕಳಿಗೆ ಹೇಗಾದರೂ ಶಿಕ್ಷಣ ಕೊಡಿಸಬಹುದು. ದೇಶ ಕಷ್ಟದಲ್ಲಿರುವಾಗ ಸಹಾಯ ಮಾಡುವುದು ಮುಖ್ಯ. ಕುಟುಂಬದವರನ್ನು ಇಲ್ಲಿಯವರೆಗೆ ಯಾವುದೇ ದೇವಸ್ಥಾನಕ್ಕೂ ಕರೆದುಕೊಂಡು ಹೋಗಿಲ್ಲ. ಅವರಿಗೆ ಪ್ರಧಾನಿ ಅವರನ್ನು ಒಮ್ಮೆ ತೋರಿಸಬೇಕು ಎಂಬ ಆಸೆ ಇದೆ’ ಎಂದರು.