ಬೆಂಗಳೂರು: ಹಬ್ಬದ ಸಂದರ್ಭಗಳಲ್ಲಿ ದಿಢೀರನೇ ಗಗನಮುಖಿಯಾಗುತ್ತಿದ್ದ ಹಣ್ಣಿನ ದರಗಳು ಸಾಮಾನ್ಯ ದಿನಗಳಲ್ಲೂ ಸ್ವಲ್ಪ ಹೆಚ್ಚಳವಾಗಿದೆ.
ಮಂಗಳವಾರ ಕೆ.ಆರ್.ಮಾರುಕಟ್ಟೆಯಲ್ಲಿ ಮೂಸಂಬಿ ಪ್ರತಿ ಕೆ.ಜಿ.ಗೆ ₹50ರಿಂದ ₹85ರಂತೆ ಮಾರಾಟವಾಯಿತು. ದ್ರಾಕ್ಷಿ ₹70, ಸೇಬು ₹80, ಕಿತ್ತಳೆ ₹50 ಮತ್ತು ದಾಳಿಂಬೆಯು ₹50ರಂತೆ ಮಾರಾಟ ಆಗುತ್ತಿತ್ತು.
‘ಈದ್ ಮಿಲಾದ್ ಸಂದರ್ಭದಲ್ಲಿ ಹಣ್ಣಿನ ಸಲಾಡ್ ಅನ್ನು ಹೆಚ್ಚು ಸೇವಿಸುತ್ತಾರೆ. ಹೀಗಾಗಿ, ಗ್ರಾಹಕರು ಎಲ್ಲ ಬಗೆಯ ಹಣ್ಣುಗಳನ್ನು ಹೆಚ್ಚು ಖರೀದಿಸುತ್ತಾರೆ. ನಗರದಲ್ಲಿ ಮಳೆ ನಿಂತು ಬಿಸಿಲು ಹೆಚ್ಚಾಗಿರುವ ಕಾರಣ ಹಣ್ಣಿನ ಜ್ಯೂಸ್ ಹಾಗೂ ಸಲಾಡ್ ಅಂಗಡಿ ಮಾಲೀಕರು ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ದಾಳಿಂಬೆ ಹಾಗೂ ಮೂಸಂಬಿ ಹಣ್ಣು ಹೆಚ್ಚು ಮಾರಾಟ ಆಗುತ್ತಿದೆ’ ಎಂದು ಹಣ್ಣಿನ ವ್ಯಾಪಾರಿ ಬಶೀರ್ ತಿಳಿಸಿದರು.
ಬಟಾಣಿ ಬೆಲೆ ದುಬಾರಿ: ಬಟಾಣಿ ಬೆಲೆ ದಿಢೀರ್ ಏರಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ ₹100ರಿಂದ ₹120ರಂತೆ ಮಾರಾಟವಾಗುತ್ತಿದೆ. ಈರುಳ್ಳಿ ₹80, ಬೆಳ್ಳುಳ್ಳಿ ₹60ರಿಂದ ₹70, ಕ್ಯಾರೆಟ್ ₹40, ಬೀನ್ಸ್ ₹40, ಟೊಮೆಟೊ ₹30ರಂತೆ ಮಾರಾಟವಾಯಿತು.