ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿದ ದೋಸೆಯ ‘ಅಮೃತ’ ನೆನಪುಗಳು

Last Updated 26 ಅಕ್ಟೋಬರ್ 2018, 17:29 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಹಕರ ದೋಸೆ ಪ್ರೀತಿ, ಹೋಟೆಲ್‌ ಮಾಲೀಕರು ಮತ್ತು ಸಿಬ್ಬಂದಿಯ ಸಹೃದಯತೆ, ಮಹನೀಯರ ನೆನಪುಗಳ ಮೆಲುಕಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ವಿದ್ಯಾರ್ಥಿ ಭವನದ ಅಮೃತ ಮಹೋತ್ಸವ’ ಸಮಾರಂಭ ಸಾಕ್ಷಿಯಾಯಿತು.

ವಿಜ್ಞಾನಿ ಸಿ.ಎನ್‌.ಆರ್‌.ರಾವ್‌, ‘ನಾನು 1951ರಲ್ಲಿ ಬಿ.ಎಸ್ಸಿಯನ್ನು ಪ್ರಥಮ ದರ್ಜೆಯಲ್ಲಿ ಪಾಸಾದಾಗ ತಂದೆಯವರೊಂದಿಗೆ ಭವನಕ್ಕೆ ಮೊದಲ ಬಾರಿಗೆ ಹೋಗಿ ದೋಸೆ ಸವಿದಿದ್ದೆ. ನಂತರ 1960ರಲ್ಲಿ ಮದುವೆಯ ಹಿಂದಿನ ದಿನ ಭಾವಿ ಪತ್ನಿಯನ್ನು ಭವನಕ್ಕೆ ಕರೆದುಕೊಂಡು ಹೋಗಿದ್ದೆ’ ಎಂದು ಸ್ಮರಿಸಿದರು.

‘ಹೋಟೆಲ್‌ವೊಂದು ಇಷ್ಟು ವರ್ಷಗಳ ಕಾಲ ಇರುವುದು ಮತ್ತು ಪ್ರತಿದಿನ ಎರಡೂವರೆ ಸಾವಿರ ದೋಸೆಗಳನ್ನು ಉಣಬಡಿಸುತ್ತಿರುವುದು ವೃತ್ತಿಪರತೆಯ ದಾಖಲೆಯೇ ಸರಿ’ ಎಂದರು.

ಸಾಹಿತಿ ಕೆ.ಎಸ್‌.ನಿಸಾರ್‌ ಅಹಮದ್‌, ‘ಕಾಲೇಜು ದಿನಗಳಲ್ಲಿ ಕ್ರಿಕೆಟ್‌ ಪಂದ್ಯ ಆಡುವಾಗ ವಿದ್ಯಾರ್ಥಿ ಭವನದ ದೋಸೆ ತಿನ್ನಿಸುವ ಬೆಟ್ಟಿಂಗ್‌ ಕಟ್ಟುತ್ತಿದ್ದೆವು. ಈ ಭವನಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಗೋಪಾಲಕೃಷ್ಣ ಅಡಿಗ, ಎಂ.ಬಿ.ಸಿಂಗ್‌, ವೈಎನ್ಕೆ ಬರುತ್ತಿದ್ದರು. ಅಂತಹ ಮಹನೀಯರನ್ನು ಕಾಣುವ, ಮಾತನಾಡಿಸುವ ಅವಕಾಶ ಇಲ್ಲಿ ಇರುತ್ತಿತ್ತು’ ಎಂದು ನೆನಪು ಬಿಚ್ಚಿಟ್ಟರು.

‘ಸೆಂಟ್ರಲ್‌ ಕಾಲೇಜಿನಲ್ಲಿ ಭೂ ವಿಜ್ಞಾನದ ಆನರ್ಸ್‌ ಪದವಿ ಓದಲು ಬಂದಾಗ 1954ರಲ್ಲಿ ಮೊದಲ ಬಾರಿಗೆ ಇಲ್ಲಿ ದೋಸೆ ತಿಂದಿದ್ದೆ. ಮಲೆನಾಡಿನಲ್ಲಿ ಎಷ್ಟೇ ವಿವಿಧ ಮರಗಳಿದ್ದರೂ ಶ್ರೀಗಂಧಕ್ಕೆ ಸಮವಲ್ಲ, ಹಾಗೆಯೇ ನಗರದಲ್ಲಿ ಎಷ್ಟೇ ಹೋಟೆಲ್‌ಗಳಿದ್ದರೂ ವಿದ್ಯಾರ್ಥಿ ಭವನಕ್ಕೆ ಸಮವಲ್ಲ’ ಎಂದು ಶ್ಲಾಘಿಸಿದರು.

ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ,‘ನಮ್ಮ ಕಂಪನಿಯು ಸಾಧನೆಯ ಮೈಲಿಗಲ್ಲೊಂದನ್ನು ತಲುಪಿದಾಗ, ಹಿರಿಯ ಸಹೋದ್ಯೊಗಿಗಳೊಂದಿಗೆ ಭವನದಲ್ಲಿ ದೋಸೆ ತಿನ್ನುವ ಮೂಲಕ ಸಂಭ್ರಮವನ್ನು ಬಹುತೇಕ ಬಾರಿ ಆಚರಿಸಿದ್ದೇವೆ. ಇಲ್ಲಿನ ಶುಚಿ, ರುಚಿ ಮತ್ತು ಗುಣಮಟ್ಟವೇ ಗ್ರಾಹಕರನ್ನು ಹಿಡಿದಿಟ್ಟಿದೆ’ ಎಂದರು.

ಅಮೃತ ಮಹೋತ್ಸವದ ಸ್ಮರಣೆಗಾಗಿ ‘ನೆನಪಿನಂಗಳ’ ಕಾಫಿ ಟೇಬಲ್‌ ಪುಸ್ತಕ ಹಾಗೂ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಹೋಟೆಲ್‌ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಇನ್ನುಮುಂದೆ ಭವನಕ್ಕೆ ಬರುವ ಯೋಧರಿಗೆ ಉಚಿತವಾಗಿ ತಿಂಡಿಗಳನ್ನು ನೀಡುವುದಾಗಿ ಘೋಷಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT