ಬೆಂಗಳೂರು: ಕಿರುಸಾಲ (ಮೈಕ್ರೊ ಫೈನಾನ್ಸ್)ಸಂಸ್ಥೆಗಳ ಸಾಲದ ಸುಳಿಯಲ್ಲಿ ಸಿಲುಕಿರುವ ಬಡ ಮಹಿಳೆಯರ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ರಾಜ್ಯ ಋಣಮುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಫೆ. 18ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಲಿದೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಬಿ.ಎಂ.ಭಟ್, ‘ಬಡತನ ನಿರ್ಮೂಲನೆ, ಉದ್ಯೋಗವಕಾಶ ಹಾಗೂ ಮಹಿಳಾ ಸಬಲೀಕರಣ ಮಾಡುತ್ತೇವೆ ಎಂದು ಕಿರುಸಾಲ ನೀಡುವ ಸಂಸ್ಥೆಗಳು ದುಬಾರಿ ಬಡ್ಡಿ ವಿಧಿಸಿ ಗ್ರಾಮೀಣ ಭಾಗದ ಬಡ ಮಹಿಳೆಯರಿಂದ ಲೂಟಿ ಮಾಡುತ್ತಿವೆ’ ಎಂದು ದೂರಿದರು.
‘ಸರ್ಕಾರದ ಬಡ್ಡಿ ನಿಯಮದ ಪ್ರಕಾರ ಸಾಲಕ್ಕೆ ಶೇ 16ಕ್ಕಿಂತ ಹೆಚ್ಚಿನ ಬಡ್ಡಿ ವಸೂಲಿ ಮಾಡುವಂತಿಲ್ಲ. ಆದರೆ, ಈ ಕಿರುಸಾಲ ಸಂಸ್ಥೆಗಳು ನಿಯಮ ಮೀರಿ ಶೇ 19ರಿಂದ ಶೇ 31ರವರೆಗೆ ಬಡ್ಡಿ ವಿಧಿಸುತ್ತಿವೆ. ಹಣ ಮರುಪಾವತಿಗೆ ದುರ್ಬಲರಾದ ಮಹಿಳೆಯರೊಂದಿಗೆ ಸಂಸ್ಥೆಗಳು ಅಮಾನವೀಯವಾಗಿ ವರ್ತಿಸುತ್ತಿವೆ’ ಎಂದರು.
ಪ್ರಧಾನ ಕಾರ್ಯದರ್ಶಿ ಎನ್. ಅನಂತ ನಾಯಕ್, ‘ಇಂತಹ ಲೂಟಿ ಕೋರ ಸಂಸ್ಥೆಗಳನ್ನು ಸರ್ಕಾರ ಮುಟ್ಟು ಗೋಲು ಹಾಕಬೇಕು. ನಿಯಮ ಉಲ್ಲಂಘಿ ಸಿರುವ ಸಾಲಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಮಹಿಳೆಯರ ಸಾಲಮನ್ನಾ ಮಾಡಿ, ಋಣಮುಕ್ತಗೊಳಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಸಂತ್ರಸ್ತ ಮಹಿಳೆಯರು ಪ್ರತಿಭಟನೆ ನಡೆಸಲಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.