ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳೊಂದಿಗೆ ಸಂವಾದ: ‘ನಮ್ಮ ಕೈ ಹಿಡಿದರೆ ನಿಮ್ಮ ಕನಸು ನನಸು’

ಮಿಲಿಯನ್‌ ವೋಟರ್‌ ರೈಸಿಂಗ್‌ ಸಮೂಹ
Last Updated 3 ಮೇ 2019, 14:10 IST
ಅಕ್ಷರ ಗಾತ್ರ

ಬೆಂಗಳೂರು: ‘ಆಡಳಿತದಲ್ಲಿ ಪಾರದರ್ಶಕತೆ ತರಲು ನಿವೇನು ಮಾಡುತ್ತೀರಾ, ಉರಿಯುತ್ತಿರುವ ಕೆರೆಗಳನ್ನು ಹೇಗೆ ಉಳಿಸುತ್ತೀರಾ, ಐಟಿ ಕಾರಿಡಾರ್‌ ಅಭಿವೃದ್ಧಿಗೆ ಪ್ರತ್ಯೇಕ ನಿಧಿ ರಚಿಸುತ್ತೀರಾ...ಹೀಗೆ ಹತ್ತಾರು ಪ್ರಶ್ನೆಗಳು ಮತದಾರರಿಂದ ತೂರಿಬಂದವು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಈ ಪ್ರಶ್ನೆಗಳಿಗೆ ಉತ್ತರಗಳಿಂದ ತಮ್ಮ ಭವಿಷ್ಯದ ಕಾರ್ಯಸೂಚಿಗಳನ್ನು ತಿಳಿಸಿದರು. ‘ನಮ್ಮನ್ನು ಗೆಲ್ಲಿಸಿ, ನಿಮ್ಮ ಕನಸುಗಳನ್ನು ಈಡೇರಿಸುತ್ತೇವೆ’ ಎಂದು ಭರವಸೆ ನೀಡಿದರು.

ಅಭ್ಯರ್ಥಿಗಳೊಂದಿಗೆ ಮತದಾರರ ಸಂವಾದಕ್ಕೆ ಮಿಲಿಯನ್‌ ವೋಟರ್‌ ರೈಸಿಂಗ್‌ ಸಮೂಹವು ಭಾನುವಾರ ವೇದಿಕೆ ಕಲ್ಪಿಸಿತ್ತು.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌, ‘ಆಡಳಿತದಲ್ಲಿ ಪಾರದರ್ಶಕತೆಗಾಗಿ ಯುಪಿಎ ಸರ್ಕಾರ ಆರ್‌ಟಿಐ ಕಾಯ್ದೆ ರೂಪಿಸಿದೆ. ಐದು ವರ್ಷಗಳಿಂದ ಅದನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆದಿವೆ. ಮುಂಬರುವ ನಮ್ಮ ಸರ್ಕಾರ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ ರಾಜ್‌, ‘ಗುರಿ ಮತ್ತು ದೂರದೃಷ್ಟಿ ಇಲ್ಲದ ಸರ್ಕಾರಗಳಿಂದಾಗಿ ಮೂಲಸೌಕರ್ಯಗಳ ಸಮಸ್ಯೆ ತಲೆದೂರಿದೆ. ಪಕ್ಷಕ್ಕಿಂತ ಹೆಚ್ಚಾಗಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿದಾಗ ಮಾತ್ರ ಅಭಿವೃದ್ಧಿ ತ್ವರಿತಗೊಳ್ಳುತ್ತದೆ. ಪಕ್ಷವೊಂದರ ಮುಖಂಡರ ಹಿಡಿತದಲ್ಲಿ ಇರಲು ಇಚ್ಛಿಸದೆ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದೇನೆ’ ಎಂದರು.

ಗೆದ್ದರೆ ಬೆಂಗಳೂರಿಗೆ ಏನು ಕೊಡುಗೆ ನೀಡುತ್ತೀರಾ ಎಂಬ ಪ್ರಶ್ನೆ ಎದುರಾದಾಗ,‘ಈ ನಗರ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಹಾಗಾಗಿ ವಿದೇಶದ ನಗರಗಳ ಜತೆ ಸ್ಪರ್ಧೆಗೆ ಇಳಿದಂತೆ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತ ಮಾಡುತ್ತೇನೆ. ಅದಕ್ಕಾಗಿ ಸಂಸತ್ತಿನಲ್ಲಿ ನಗರದ ಗಟ್ಟಿಧ್ವನಿಯಾಗಿ ಪ್ರತಿನಿಧಿಸುತ್ತೇನೆ’ ಎಂದರು ರಿಜ್ವಾನ್‌.

‘ಚುನಾವಣೆ ಎಂಬುದು ಇಂದು ವ್ಯವಹಾರ ಆಗಿದೆ’ ಎಂದು ದೂರಿದ ಪ್ರಕಾಶ್‌ ರಾಜ್‌, ‘ಉದ್ಯೋಗ ಸೃಷ್ಟಿ, ಅಪೌಷ್ಠಿಕತೆ ನಿವಾರಣೆ ಯೋಜನೆಗಳನ್ನು ಕಾರ್ಯಗತ ಮಾಡುವುದು ಇಂದಿನ ರಾಜಕಾರಣಿಗಳಿಗೆ ತಿಳಿದಿಲ್ಲ’ ಎಂದು ಆರೋಪಿಸಿದರು.

ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌,‘ಕೇಂದ್ರ ಸರ್ಕಾರದ ಹತ್ತಾರು ಯೋಜನೆಗಳಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. ಅನುದಾನಗಳನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಜನರು ಕೈ ಹಿಡಿಯುವ ವಿಶ್ವಾಸವಿದೆ’ ಎಂದು ಹೇಳಿದರು.

‘ಪೂರ್ವ ನಿಗದಿತ ಪ್ರಚಾರ ಕಾರ್ಯಕ್ರಮ ಇದೆ’ ಎಂದು ಹೇಳಿ ಸಂವಾದದ ಆರಂಭದಲ್ಲಿಯೇ ಹೊರನಡೆದರು.

ಪ್ರಕಾಶ್‌ ರಾಜ್‌ ಹೇಳಿದ್ದು

* ಒಳ್ಳೆಯ ಅಭ್ಯರ್ಥಿಯ ಆಯ್ಕೆ ಮತದಾರರ ಗೆಲುವು

* 3 ತಿಂಗಳ ಅಧ್ಯಯನ ಮಾಡಿ ಸಿದ್ಧಪಡಿಸಿರುವ ನನ್ನ ಪ್ರಣಾಳಿಕೆ ಓದಿ

* ಜನಪರ ಕಾಳಜಿ ವ್ಯಕ್ತಿಯಿಂದಲೇ ಅಭಿವೃದ್ಧಿಯ ವೇಗ ಹೆಚ್ಚುತ್ತದೆ

ರಿಜ್ವಾನ್‌ ಅರ್ಷದ್ ಹೇಳಿದ್ದು

* ಸಾರ್ವಜನಿಕ ಸಾರಿಗೆ, ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡುವೆ

* ಪರಿಸರ ರಕ್ಷಣೆ, ಮಕ್ಕಳ ಕಲ್ಯಾಣ ಹಾಗೂ ಮಹಿಳಾ ಸುರಕ್ಷತೆಗೆ ಗಮನ ಹರಿಸುವೆ

* ಐಟಿ ಕಾರಿಡಾರ್‌ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ಕೊಡುವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT