ಬೆಂಗಳೂರು: ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಮಳೆ, ನೀರಿನ ಕೊರತೆ, ತಾಪಮಾನ ಹೆಚ್ಚಳ ಸೇರಿದಂತೆ ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನೇರವಾಗಿ ಪಡೆದುಕೊಂಡರು.
ಮೂರು ಗಂಟೆಗಳ ಕಾಲ ವಿಪತ್ತು ನಿರ್ವಹಣಾ ಕೇಂದ್ರದಲ್ಲಿದ್ದ ಸಚಿವರು, ರಾಜ್ಯದಲ್ಲಿ ಹಿಂದಿನ ವರ್ಷಗಳಲ್ಲಿ ಮಳೆಯ ಪ್ರಮಾಣ, ಪ್ರಸಕ್ತ ವರ್ಷದಲ್ಲಿ ಆಗಿರುವ ಮಳೆ, ಜಲಾಶಯಗಳಲ್ಲಿ ಸಂಗ್ರಹವಿರುವ ನೀರಿನ ಪ್ರಮಾಣ, ಒಳ ಹರಿವು ಮತ್ತಿತರ ವಿಷಯಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಕೇಂದ್ರದ ವಿಜ್ಞಾನಿಗಳು ಮತ್ತು ತಜ್ಞರ ಜತೆ ಸಮಾಲೋಚನೆ ನಡೆಸಿ, ಭವಿಷ್ಯದಲ್ಲಿ ಎದುರಾಗುವ ಸವಾಲುಗಳ ಬಗ್ಗೆ ವಿವರ ಪಡೆದರು.
ಕಾವೇರಿ ಕಣಿವೆಯಲ್ಲಿ ಮಳೆಯ ಸಾಧ್ಯತೆ, ಬೆಳೆ ರಕ್ಷಣೆಗೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತೂ ಸಮಾಲೋಚನೆ ನಡೆಸಿದರು. ಹವಾಮಾನ ಮುನ್ಸೂಚನೆ ನೀಡುವ ‘ವರುಣ ಮಿತ್ರ’ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿದ ಚಲುವರಾಯಸ್ವಾಮಿ, ತಾವೇ ಕರೆ ಸ್ವೀಕರಿಸಿ ಸಾರ್ವಜನಿಕರೊಂದಿಗೆ ಮಾತನಾಡಿದರು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ರಾಜ್ಯದಲ್ಲಿ ಈ ವಾರ ಉತ್ತಮ ಮಳೆಯಾಗಲಿದೆ ಎಂದು ವಿಕೋಪ ನಿರ್ವಹಣಾ ಕೇಂದ್ರದ ವರದಿಗಳು ತಿಳಿಸಿವೆ. ಹೆಚ್ಚು ಮಳೆಯಾಗಿ ರೈತರ ಸಂಕಷ್ಟ ದೂರವಾಗಬೇಕು ಎಂಬುದೇ ಎಲ್ಲರ ಆಶಯ’ ಎಂದರು.
ಕೇಂದ್ರದ ಹಿರಿಯ ಸಮಾಲೋಚಕ ಶ್ರೀನಿವಾಸ್ ರೆಡ್ಡಿ ಹಾಗೂ ಕಿರಿಯ ವೈಜ್ಞಾನಿಕ ಅಧಿಕಾರಿ ಸುನೀಲ್ ಗವಾಸ್ಕರ್ ಹವಾಮಾನ ಮುನ್ಸೂಚನೆ, ವಿಕೋಪ ನಿರ್ವಹಣಾ ಕೇಂದ್ರದ ಕೆಲಸಗಳ ಕುರಿತು ಮಾಹಿತಿ ನೀಡಿದರು.
ಕೃಷಿ ಆಯುಕ್ತ ವೈ. ಎಸ್. ಪಾಟೀಲ, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಗಿರೀಶ್, ಕೃಷಿ ಇಲಾಖೆ ನಿರ್ದೇಶಕ ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.