ಬೆಂಗಳೂರು: ‘ನನ್ನ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವ ಪ್ರಶಾಂತ್ ಸಂಬರಗಿ ಅವರು ಗೌರವಕ್ಕೆ ಚ್ಯುತಿ ತರುತ್ತಿದ್ದಾರೆ’ ಎಂದು ಆರೋಪಿಸಿ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಪೊಲೀಸರಿಗೆ ದೂರು ನೀಡಿದ್ದಾರೆ.
‘ಸುಖಾಸುಮ್ಮನೇ ಹೇಳಿಕೆ ನೀಡಿ ಅಪಪ್ರಚಾರ ಮಾಡುತ್ತಿರುವ ಹಾಗೂ ಸಂಬಂಧವಿಲ್ಲದ ವಿಷಯದಲ್ಲಿ ನನ್ನ ಹೆಸರು ಎಳೆದು ತರುತ್ತಿರುವ ಸಂಬರಗಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದೂ ಜಮೀರ್ ಅವರು ಒತ್ತಾಯಿಸಿದ್ದಾರೆ.
ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ, ‘ಶಾಸಕ ಜಮೀರ್ ಅವರು ಬುಧವಾರ ದೂರು ನೀಡಿದ್ದಾರೆ. ಅದನ್ನು ಆಧರಿಸಿ ಪ್ರಶಾಂತ್ ಸಂಬರಗಿ ವಿರುದ್ಧ ಎನ್ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಲಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಡ್ರಗ್ಸ್ ಜಾಲದ ಬಗ್ಗೆ ಇತ್ತೀಚೆಗೆ ಹೇಳಿಕೆ ನೀಡಿದ್ದ ಸಂಬರಗಿ, ನಟಿ ಸಂಜನಾ ಹಾಗೂ ಶಾಸಕರ ಬಗ್ಗೆ ಮಾತನಾಡಿದ್ದರು. ಈ ಹೇಳಿಕೆಯನ್ನೇ ಉಲ್ಲೇಖಿಸಿ ಶಾಸಕ ಜಮೀರ್ ಅವರು ದೂರು ನೀಡಿದ್ದಾರೆ.