ಬೆಂಗಳೂರು: ನಗರದಲ್ಲಿ ಬಯಲಿನಲ್ಲಿ ಮೂತ್ರ ವಿಸರ್ಜನೆಗೆ ಅವಕಾಶ ಕಲ್ಪಿಸದಿರಿ, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ, ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ಒದಗಿಸಿ...
ಬಿಬಿಎಂಪಿಯು ಜನಾಗ್ರಹ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ‘ನನ್ನ ನಗರ– ನನ್ನ ಬಜೆಟ್’ ಅಭಿಯಾನದಲ್ಲಿ ಜನರು ಮಂಡಿಸಿರುವ ಪ್ರಮುಖ ಬೇಡಿಕೆಗಳಿವು. ಈ ಅಭಿಯಾನಕ್ಕೆ ಉತ್ತಮ ಜನ ಬೆಂಬಲ ವ್ಯಕ್ತವಾಗಿದ್ದು, ಬಿಬಿಎಂಪಿಯ 2021–22ನೇ ಸಾಲಿನ ಬಜೆಟ್ಗೆ ಒಟ್ಟು 9,076 ಸಲಹೆಗಳು ಬಂದಿವೆ.
2020ರ ಡಿ. 8ರಂದು ಈ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. 2021ರ ಜ.10ರವರೆಗೆ ನಡೆದ ಈ ಅಭಿಯಾನದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳು (ಆರ್ಡಬ್ಲ್ಯುಎ), ನಾಗರಿಕ ಸಂಸ್ಥೆಗಳು ಮತ್ತು ಸ್ವಯಂಸೇವಾ ಗುಂಪುಗಳು ಸೇರಿ 40ಕ್ಕೂ ಅಧಿಕ ಸಂಸ್ಥೆಗಳು ಬಿಬಿಎಂಪಿಯೊಂದಿಗೆ ಕೈಜೋಡಿಸಿದ್ದವು. ನಗರದ ಎಲ್ಲ ವಾರ್ಡುಗಳಿಂದಲೂ ಬಜೆಟ್ಗೆ ಸಲಹೆಗಳು ಬಂದಿವೆ.
‘ಬಜೆಟ್ ಸಿದ್ಧಪಡಿಸುವಾಗ ಜನರ ಸಲಹೆಗಳು ಅತ್ಯಂತ ಮುಖ್ಯ. ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಪರಿಪಾಠಕ್ಕೆ ಇತಿಶ್ರಿ ಹಾಡಲು ಹಾಗೂ ಸುರಕ್ಷಿತ ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೆ ಆದ್ಯತೆ ನೀಡಲು ಬಿಬಿಎಂಪಿ ಬದ್ಧ. ಜನರ ಸಲಹೆಗಳನ್ನು ಆಡಳಿತಾಧಿಕಾರಿ ಮುಂದೆ ಮಂಡಿಸಲಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.