ಬೆಂಗಳೂರು: ನಾಯಂಡಹಳ್ಳಿ ಮೆಟ್ರೊ ನಿಲ್ದಾಣ ಬಳಿಯ ಪಂತರಪಾಳ್ಯ ಸಮೀಪ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ್ದು, ಡೆಲಿವರಿ ಬಾಯ್ ಪ್ರಸನ್ನ ಕುಮಾರ್ (25) ಮೃತಪಟ್ಟಿದ್ದಾರೆ.
‘ಎಚ್.ಡಿ.ಕೋಟೆಯ ಪ್ರಸನ್ನ ಕುಮಾರ್ ಡೆಲಿವರಿ ಬಾಯ್ ಆಗಿದ್ದರು. ಮೈಸೂರು ರಸ್ತೆಯಲ್ಲಿ ಭಾನುವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕಾರು ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ’ ಎಂದು ಬ್ಯಾಟರಾಯನಪುರ ಸಂಚಾರ ಪೊಲೀಸರು ಹೇಳಿದರು.
‘ಅಪಘಾತಕ್ಕೆ ಕಾರಣವಾದ ಕಾರು ಚಾಲಕ ವಿನಾಯಕ್ ಪರಾರಿಯಾಗಲು ಯತ್ನಿಸಿದ್ದ. ಸ್ಥಳೀಯರೇ ಆತನನ್ನು ಬೆನ್ನಟ್ಟಿ ಹಿಡಿದು ಥಳಿಸಿ ಠಾಣೆಗೆ ಒಪ್ಪಿಸಿದ್ದಾರೆ. ಪಾನಮತ್ತನಾಗಿ ಆತ ಕಾರು ಚಲಾಯಿಸಿದ್ದನೆಂಬುದು ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಿದೆ’ ಎಂದರು.
ಸಹೋದ್ಯೋಗಿಗಳ ಜೊತೆ ಮದ್ಯ ಪಾರ್ಟಿ: ‘ಆರೋಪಿ ವಿನಾಯಕ್, ರಾಜಾಜಿನಗರದಲ್ಲಿರುವ ವಾಹನ ಮಾರಾಟ ಮಳಿಗೆಯಲ್ಲಿ ಮಾರಾಟ ಪ್ರತಿನಿಧಿ ಆಗಿ ಕೆಲಸ ಮಾಡುತ್ತಿದ್ದ. ರಾತ್ರಿ ಸಹೋದ್ಯೋಗಿಗಳೆಲ್ಲರೂ ಸೇರಿ ಮದ್ಯದ ಪಾರ್ಟಿ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಸಹೋದ್ಯೋಗಿಯೊಬ್ಬನನ್ನು ರಾಜರಾಜೇಶ್ವರಿನಗರದ ಮನೆಗೆ ಡ್ರಾಪ್ ಮಾಡಲು ವಿನಾಯಕ್ ಕಾರಿನಲ್ಲಿ ಹೊರಟಿದ್ದ. ನಾಲ್ವರು ಕಾರಿನಲ್ಲಿದ್ದರು. ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದ’ ಎಂದರು.
100 ಮೀಟರ್ ಉಜ್ಜಿಕೊಂಡು ಹೋದ ಕಾರು: ‘ಪ್ರಸನ್ನಕುಮಾರ್ ಅವರ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿತ್ತು. ನಂತರ, ದ್ವಿಚಕ್ರ ವಾಹನ ಹಾಗೂ ಪ್ರಸನ್ನ ಕುಮಾರ್ ಅವರನ್ನು 100 ಮೀಟರ್ವರೆಗೂ ಕಾರು ಉಜ್ಜಿಕೊಂಡು ಹೋಗಿತ್ತು’ ಎಂದು ಪೊಲೀಸರು ಹೇಳಿದರು.
‘ಆಕ್ರೋಶಗೊಂಡಿದ್ದ ಜನ, ಕಾರಿನ ಗಾಜುಗಳನ್ನು ಒಡೆದಿದ್ದಾರೆ. ಕಾರಿನಲ್ಲಿದ್ದ ಇಬ್ಬರು ಯುವತಿಯರು ಸೇರಿ ಮೂವರು ಪರಾರಿಯಾಗಿದ್ದಾರೆ. ಅಪಘಾತದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿನಾಯಕ್ನನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.