ನೆಲಮಂಗಲ: ನಗರಸಭೆ ವ್ಯಾಪ್ತಿಯ ಅರಿಶಿನಕುಂಟೆಯ ಎಟಿಎಂ ಘಟಕವೊಂದರಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದ್ದು, ಗ್ಯಾಸ್ ಕಟರ್ನಿಂದ ಯಂತ್ರ ಕೊರೆಯುವ ವೇಳೆ ಬೆಂಕಿ ಹೊತ್ತಿಕೊಂಡು ನೋಟುಗಳು ಸುಟ್ಟು ಕರಕಲಾಗಿವೆ.
ಗುರುವಾರ ರಾತ್ರಿ ನಡೆದಿರುವ ಕಳ್ಳತನ ಯತ್ನ ಸಂಬಂಧ ನೆಲಮಂಗಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಅರಿಶಿನಕುಂಟೆಯ ಬ್ಯಾಂಕ್ವೊಂದರ ಎಟಿಎಂ ಘಟಕಕ್ಕೆ ದುಷ್ಕರ್ಮಿಗಳು ನುಗ್ಗಿದ್ದರು. ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರವನ್ನು ತುಂಡರಿಸಿ ಹಣ ದೋಚುವುದು ಅವರ ಉದ್ದೇಶವಾಗಿತ್ತು. ಆದರೆ, ಯಂತ್ರದ ಮೇಲ್ಭಾಗಕ್ಕೆ ಗ್ಯಾಸ್ ಕಟರ್ ತಾಗುತ್ತಿದ್ದಂತೆ ಸೈರನ್ ಮೊಳಗಿತ್ತು’ ಎಂದು ಪೊಲೀಸರು ಹೇಳಿದರು.
‘ಬ್ಯಾಂಕ್ನ ಕಚೇರಿಗೆ ಕಳ್ಳತನದ ಬಗ್ಗೆ ಎಚ್ಚರಿಕೆ ಸಂದೇಶ ರವಾನೆಯಾಗಿತ್ತು. ಎಚ್ಚೆತ್ತ ಬ್ಯಾಂಕ್ ನೌಕರು, ಘಟಕಕ್ಕೆ ಬಂದಿದ್ದರು. ಅಷ್ಟರಲ್ಲೇ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ತಿಳಿಸಿದರು.
‘ದುಷ್ಕರ್ಮಿಗಳು ಗ್ಯಾಸ್ ಕಟರ್ನಿಂದ ಯಂತ್ರ ತುಂಡರಿಸುವ ವೇಳೆ ಬೆಂಕಿ ಕಾಣಿಸಿಕೊಂಡಿತ್ತು. ಕೆಲ ನಿಮಿಷಗಳಲ್ಲಿ ನಗದು ಪೆಟ್ಟಿಗೆಗೆ ಬೆಂಕಿ ತಾಗಿತ್ತು. ಅದರಲ್ಲಿದ್ದ ₹ 500 ಹಾಗೂ ₹ 100 ಮುಖಬೆಲೆಯ ₹ 4.60 ಲಕ್ಷ ನೋಟುಗಳು ಸುಟ್ಟು ಕರಕಲಾಗಿವೆ’ ಎಂದರು.
‘ಕಳ್ಳತನ ಯತ್ನ ಸಂಬಂಧ ಬ್ಯಾಂಕ್ ಅಧಿಕಾರಿಗಳು ದೂರು ನೀಡಿದ್ದಾರೆ. ಹಲವು ದಿನಗಳಿಂದ ಸಂಚು ರೂಪಿಸಿ ದುಷ್ಕರ್ಮಿಗಳು ಕೃತ್ಯ ಎಸಗಿರುವ ಮಾಹಿತಿ ಇದೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ಹೇಳಿದರು.